ಫೇಸ್‌ಬುಕ್ ಲೈವ್‌ ಮಾಡಿ ಜಾಲಿ ರೈಡ್: ಸವಾರ ದುರ್ಮರಣ, ಮತ್ತೋರ್ವನ ಸ್ಥಿತಿ ಗಂಭೀರ!

ಮಾಹಿತಿ ವಿನಿಮಯಕ್ಕಾಗಿ, ಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳುವುದಕ್ಕಾಗಿರುವ ಸಾಮಾಜಿಕ ಜಾಲತಾಣಗಳು ಜೀವವನ್ನೇ ಬಲಿತೆಗೆದುಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಅಗರ್ತಲಾ: ಮಾಹಿತಿ ವಿನಿಮಯಕ್ಕಾಗಿ, ಸ್ಮರಣೀಯ ಕ್ಷಣಗಳನ್ನು ಹಂಚಿಕೊಳ್ಳುವುದಕ್ಕಾಗಿರುವ ಸಾಮಾಜಿಕ ಜಾಲತಾಣಗಳು ಜೀವವನ್ನೇ ಬಲಿತೆಗೆದುಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ ಸೋಮವಾರ ತ್ರಿಪುರಾದಲ್ಲಿ ನಡೆದ ದ್ವಿಚಕ್ರವಾಹನ ಸವಾರ ಫೇಸ್ ಬುಕ್ ಲೈವ್ ಸವಾರಿ ಮಾಡುವ ವೇಳೆ ಸಾವಿಗೀಡಾಗಿರುವುದು ಇಂತಹ ಸಾಹಸಕ್ಕೆ ಕೈ ಹಾಕುವವರಿಗೆ ಎಚ್ಚರಿಕೆಯ ಪಾಠವಾಗಬೇಕಿದೆ.
ದಕ್ಷಿಣ ತ್ರಿಪುರದ ಸಬ್ರೂಮ್‌ನ ಹರೀನಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ 25 ವರ್ಷದ ನರ್ಸಿಂಗ್ ವಿದ್ಯಾರ್ಥಿ ರಾಹುಲ್ ದಾಸ್ ಮೋಟಾರು ಬೈಕು ಓಡಿಸುವಾಗ ಫೇಸ್‌ಬುಕ್ ಲೈವ್ ಮಾಡುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾಹುಲ್ ಹಿಂಬದಿಯಲ್ಲಿ ಕುಳಿತಿದ್ದ ಸುಮನ್ ದಾಸ್ (26) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ರಾಹುಲ್ ಹಾಗೂ ಸುಮನ್ ದಾಸ್ ಅವರ ಜಾಲಿ ರೇಡ್ ಫೇಸ್ ಬುಕ್ ಲೈವ್ ವಿಡಿಯೋದಲ್ಲಿ ದಾಖಲಾಗಿದೆ.
ಕೋಲ್ಕತಾದ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ರಾಹುಲ್ ಪೋಷಕರ ಭೇಟಿಗಾಗಿ ಎರಡು ದಿನಗಳ ಮಟ್ಟಿಗೆ ಸ್ವಗ್ರಾಮಕ್ಕೆ ತೆರಳಿದ್ದು, ಸೋಮವಾರ ರಾತ್ರಿಯ ವಿಮಾನದಲ್ಲಿ ಕೋಲ್ಕತಾಗೆ ಮರಳಲು ಮುಂಗಡ ಟಿಕೆಟ್ ಕಾಯ್ದಿರಿಸಲಾಗಿತ್ತು. ಆದರೆ ಅಗರ್ತಲಾ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ನಿರ್ಮಾಣ ಹಂತದಲ್ಲಿರುವ ನೂತನ ರೈಲು ನಿಲ್ದಾಣ ವೀಕ್ಷಿಸಲು ಸ್ನೇಹಿತನ ಜೊತೆಗೆ ತೆರಳಿದ್ದರು. ಅಲ್ಲಿಂದ ಹಿಂದಿರುಗುವಾಗ ಮೋಟಾರ್ ಬೈಕ್ ಸವಾರಿಯನ್ನು ಫೇಸ್ ಬುಕ್ ಲೈವ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ಮೋಟಾರ್ ಬೈಕ್ ಸವಾರಿಯಲ್ಲಿ ಆಸಕ್ತನಾಗಿದ್ದು, ಆಗಾಗ್ಗೆ ಜಾಲಿ ರೇಡ್ ಗಳನ್ನು ಫೇಸ್ ಬುಕ್ ಲೈವ್ ಮಾಡುತ್ತಿದ್ದ ಕಾರಣ ಜಾಲತಾಣದಲ್ಲಿ 300ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದ್ದರು. ಸೋಮವಾರ ಅಪಘಾತಕ್ಕೂ ಮುನ್ನ ಅವರ ಜಾಲಿ ರೇಡ್ ವಿಡಿಯೋ ವನ್ನು 10 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದರು. ಆದರೆ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಹಿಂಬಾಲಕರು ಸಂತಾಪ ಸೂಚಿಸಿದ್ದಾರೆ.
ರಾಹುಲ್ ಅತಿ ವೇಗವಾಗಿ ಬೈಕ್ ಚಲಾಯಿಸುತ್ತ ಫೇಸ್ ಬುಕ್ ಲೈವ್ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಬೈಲಿ ಸೇತುವೆಗೆ ಬೈಕ್ ಡಿಕ್ಕಿ ಹೊಡೆದು ರಾಹುಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಸುಮನ್ ಗಂಭೀರವಾಗಿ ಗಾಯಗೊಂಡರು. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಇಬ್ಬರನ್ನೂ ಅಗರ್ತಲಾ ಆಸ್ಪತ್ರೆಗೆ ಸಾಗಿಸಿದರಾದರೂ, ರಾಹುಲ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎನ್ನಲಾಗಿದೆ.
ರಾಹುಲ್ ಜುಲೈ 20ರಂದು ಗ್ರಾಮಕ್ಕೆ ತೆರಳಲು ಅಗರ್ತಲಾ ವಿಮಾನ ನಿಲ್ದಾಣಕ್ಕೆ ಬರುವ ಕೆಲ ಗಂಟೆಗಳ ಮೊದಲೂ ಅತ್ಯಂತ ಅಪಾಯಕಾರಿ ಬೈಕ್ ಸವಾರಿಯನ್ನು ಫೇಸ್ ಬುಕ್ ಲೈವ್ ಮಾಡಿದ್ದರು. ಆದರೆ ಮತ್ತೊಂದು ಫೇಸ್ ಬುಕ್ ಲೈವ್ ಸವಾರಿ ಮಾಡುವಾಗ ಜೀವವನ್ನೇ ಕಳೆದುಕೊಂಡಿದ್ದಾರೆ. 
“ಆತ ಅತ್ಯಂತ ವೇಗವಾಗಿ ಹಾಗೂ ಮನಬಂದಂತೆ ಮೋಟಾರ್ ಬೈಕ್ ಸವಾರಿ ಮಾಡುತ್ತಿದ್ದುದರಿಂದ ನಾವು ಯಾವಾಗಲೂ ಆತಂಕದಿಂದ ಇರುತ್ತಿದ್ದೆವು” ಎಂದು ರಾಹುಲ್ ಅವರ ತಂದೆ ನಿರ್ಮಲ್ ದಾಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com