ಚಂಡೀಗಢ: ಅಂತಾರಾಜ್ಯ ಗಡಿಗಳಲ್ಲಿ ಜಂಟಿ ಕಾರ್ಯಾಚರಣೆಯಿಂದ ಮಾದಕ ವಸ್ತು ಸಾಗಣೆಯನ್ನು ತಡೆಗಟ್ಟಬಹುದು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.
ಮಾದಕ ವಸ್ತು ನಿಯಂತ್ರಣ ಮತ್ತು ಸವಾಲುಗಳು ಕುರಿತು ಎರಡನೇ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಾದಕ ವಸ್ತು ನಿಯಂತ್ರಣಕ್ಕಾಗಿ ಕ್ರಿಯಾ ಯೋಜನೆ ಹಾಗೂ ಸಮಗ್ರ ಕಾರ್ಯತಂತ್ರ ಕುರಿತು ವಿವರಿಸಿದರು.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಭಾರತದಲ್ಲಿ ತೊಂದರೆ ಉಂಟುಮಾಡುವ ನಿಟ್ಟಿನಲ್ಲಿ ಉರಿ, ಕಾಂದ್ಲಾ ಮತ್ತಿತರ ಕಡೆಗಳಿಂದ ಮಾದಕವಸ್ತುವನ್ನು ಸಾಗಿಸುತ್ತಿರುವ ಪಾಕಿಸ್ತಾನ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿದೆ. ಯಾವುದೇ ರಾಜ್ಯ ಏಕಾಂಗಿಯಾಗಿ ಮಾದಕ ವಸ್ತು ಸಾಗಣೆಯನ್ನು ತಡಗೆಟ್ಟಲು ಸಾಧ್ಯವಿಲ್ಲ, ಎಲ್ಲ ರಾಜ್ಯಗಳು ಒಗ್ಗೂಡಿ ಇದರ ಸಾಗಣೆಯನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟರು.