ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ಕೇಂದ್ರವೂ ಸಮಾನ ಹೊಣೆಗಾರನಾಗಿದ್ದು, ಕೇಂದ್ರ ಮತ್ತು ಬಿಜೆಪಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ದೇಶದಲ್ಲಿ ನಾನು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಏಕೈಕ ಧ್ವನಿಯಾಗಿದ್ದು, ಕೇಂದ್ರ ಸರ್ಕಾರ ನನ್ನ ಧ್ವನಿ ಅಡಗಿಸಲು ಯತ್ನಿಸುತ್ತಿದ್ದಾರೆ ಮತ್ತು ಈ ಮೂಲಕ ನನ್ನ ಸರ್ಕಾರ ಬೀಳಿಸಲು ಪಿತೂರಿ ನಡೆಸಿದೆ ಎಂದು ದೂರಿದ್ದಾರೆ.
ಬಿಜೆಪಿ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳಿ ಸುದ್ದಿಗಳನ್ನು ಹಬ್ಬಿಸಲು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ ಯಾವುದೇ ಹಿಂಸಾಚಾರ ಅಥವಾ ದಂಗೆ ನಡೆದರೆ ಅದಕ್ಕೆ ಕೇಂದ್ರವೂ ಸಮಾನ ಹೊಣೆಗಾರ ಎಂದು ದೀದಿ ವರದಿಗಾರರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಬೀಳಿಸುವ ಬಿಜೆಪಿ ತಂತ್ರ ಫಲಿಸುವುದಿಲ್ಲ. ಇದು ನನ್ನ ಧ್ವನಿ ಅಡಗಿಸಲು ನಡೆಯುತ್ತಿರುವ ದೊಡ್ಡ ಸಂಚು. ಏಕೆಂದರೆ ಅವರ ವಿರುದ್ಧ ಧ್ವನಿ ಎತ್ತುತ್ತಿರುವ ಏಕೈಕ ವ್ಯಕ್ತಿ ನಾನು ಅಂತ ಗೊತ್ತು ಎಂದಿದ್ದಾರೆ.