ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಬೆಂಬಲ ನೀಡಿದ್ದು, ಜೂನ್ 17ರಂದು ಸಂಪೂರ್ಣ ವೈದ್ಯಕೀಯ ಸೇವೆ ಬಂದ್ ಗೆ ಕರೆ ನೀಡಿದೆ.
ಈಗಾಗಲೇ ಬಂಗಾಳಿ ವೈದ್ಯರಿಗೆ ಬೆಂಬಲವಾಗಿ ಇಂದಿನಿಂದ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಲು ಆರಂಭಿಸಿರುವ ಐಎಂಎ, ಸೋಮವಾರ ದೇಶಾದ್ಯಂತ ತುರ್ತು ಆರೋಗ್ಯ ಸೇವೆ ಹೊರತುಪಡಿಸಿ ಇತರೆ ಆರೋಗ್ಯ ಸೇವೆಗಳನ್ನು ಬಂದ್ ಮಾಡಿ ಪ್ರತಿಭಟಿಸುವುದಾಗಿ ತಿಳಿಸಿದೆ.
ಇದೇ ವೇಳೆ ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ ಕಠಿಣ ವಿಧಿಸುವಂತಹ ಕಾನೂನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ವೈದ್ಯಕೀಯ ಸಂಘ, ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ ಕನಿಷ್ಠ ಏಳು ವರ್ಷ ಜೈಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.
ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಪದೇಪದೆ ಮರು ಕಳುಹಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಎಂಎ ಶನಿವಾರ ಮತ್ತು ಭಾನುವಾರವೂ ಕಪ್ಪು ಪಟ್ಟಿ ಧರಿಸಿ ಮುಷ್ಕರ ನಡೆಸಲು ನಿರ್ಧರಿಸಿದೆ.