ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ವೈದ್ಯರ ಪ್ರತಿಭಟನೆ ತಾರಕಕ್ಕೇರಿದ್ದು, ಸರ್ಕಾರದ ಮಧ್ಯ ಪ್ರವೇಶದಿಂದಲೂ ತೃಪ್ತ ರಾಗದ ವೈದ್ಯರು ಇದೀಗ ರಾಜಿನಾಮೆ ನೀಡುವ ಹಂತಕ್ಕೆ ಬಂದಿದ್ದಾರೆ.
ಹೌದು ಶುಕ್ರವಾರ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ ಸುಮಾರು 16 ಹಿರಿಯ ವೈದ್ಯರು ಸೇರಿದಂತೆ ಪಶ್ಚಿಮ ಬಂಗಾಳ ವಿವಿಧೆಡೆಯಿಂದ ಸುಮಾರು 43 ಮಂದಿ ವೈದ್ಯರು ತಮ್ಮ ಸೇವೆಗೆ ರಾಜಿನಾಮೆ ನೀಡುತ್ತಿರುವುದಾಗಿ ಹೇಳಿ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಈ ವರೆಗೂ ನಾವು ನಮ್ಮ ಶಕ್ತಿ ಮೀರಿ ಸೇವೆ ನೀಡಿದ್ದೇವೆ. ಯಾವುದೇ ಕಾರಣಕ್ಕೂ ಆಸ್ಪತ್ರೆಯಲ್ಲಿ ಕಾರ್ಯ ಚಟುವಟಿಕೆಗಳ ಮೇಲೆ ಧಕ್ಕೆಯಾಗದಂತೆ ಮುಂಜಾಗ್ರತೆ ವಹಿಸಿದ್ದೆವು, ಆದರೆ ಪ್ರಸ್ತುತ ಪರಿಸ್ಥಿತಿ ತೀವ್ರಗೊಂಡಿದ್ದು, ನಾವು ನಮ್ಮ ಕರ್ತವ್ಯ ಮುಂದುವರೆಸುವ ಪರಿಸ್ಥಿತಿಯಲ್ಲಿಲ್ಲ. ಹೀಗಾಗಿ ನಾವು ನಮ್ಮ ಸೇವೆಗೆ ರಾಜಿನಾಮೆ ನೀಡುತ್ತಿದ್ದೇವೆ ಎಂದು ವೈದ್ಯರು ಪತ್ರ ಬರೆದಿದ್ದಾರೆ.
ಇನ್ನು ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ 16 ವೈದ್ಯರು ಮಾತ್ರವಲ್ಲದೇ, ಉತ್ತರ ಬಂಗಾಳ ವೈದ್ಯಕೀಯ ಕಾಲೇಜಿನ 27 ಮಂದಿ ವೈದ್ಯರೂ ಕೂಡ ತಮ್ಮ ಸೇವೆಗೆ ರಾಜಿನಾಮೆ ನೀಡಿದ್ದಾರೆ. ವೈದ್ಯರು ತಮ್ಮ ರಾಜಿನಾಮೆ ಪತ್ರವನ್ನು ಬಂಗಾಳ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳ ಕಚೇರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಪತ್ರದಲ್ಲಿ ಆರ್ ಜಿ ಕರ್ ವೈದ್ಯಕೀಯ ಕಾಲೇಜಿನ 16 ವೈದ್ಯರು ಸಹಿ ಮಾಡಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ನಿರತರಾಗಿರುವ ಇತರೆ ವೈದ್ಯರೂ ಕೂಡ ಇದೇ ದಾರಿ ಹಿಡಿಯುವ ಆತಂಕ ವ್ಯಕ್ತವಾಗಿದ್ದು, ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ರೋಗಿಗಳು ಮತ್ತು ಅವರ ಸಂಬಂಧಿಕರು ಆಗ್ರಹಿಸಿದ್ದಾರೆ.