ಚಿರತೆಯನ್ನೇ ಅಟ್ಟಾಡಿಸಿ ಕೊಂದ 'ಶ್ವಾನ ಸೇನೆ', ಸಂಘಟಿತ ಹೋರಾಟಕ್ಕೆ ಸೋತು ಸಾವನ್ನಪ್ಪಿದ 'ಕಾಡುಮೃಗ'

ತಮ್ಮನ್ನು ಬೇಟೆಯಾಡಲು ಬಂದ ಚಿರತೆಯನ್ನೇ ನಾಯಿಗಳ ಹಿಂಡು ಸಂಘಟಿತ ಹೋರಾಟದ ಮೂಲಕ ಕೊಂದು ಹಾಕಿರುವ ಘಟನೆ ಕೇರಳದಲ್ಲಿ ನಡೆದಿದೆ.
ನಾಯಿ-ಚಿರತೆ ಕಾಳಗ
ನಾಯಿ-ಚಿರತೆ ಕಾಳಗ
ಕೊಚ್ಚಿ: ತಮ್ಮನ್ನು ಬೇಟೆಯಾಡಲು ಬಂದ ಚಿರತೆಯನ್ನೇ ನಾಯಿಗಳ ಹಿಂಡು ಸಂಘಟಿತ ಹೋರಾಟದ ಮೂಲಕ ಕೊಂದು ಹಾಕಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕಾಡುಮೃಗ ಚಿರತೆ ನಾಡಿಗೆ ಬಂದು ನಾಯಿಗಳನ್ನು ಎಳೆದುಕೊಂಡು ಹೋಗಿ ಬೇಟೆಯಾಡಿದ ಸುದ್ದಿಗಳನ್ನು ಸಾಮಾನ್ಯವಾಗಿ ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಶ್ವಾನಗಳೇ ತಮ್ಮನ್ನು ಬೇಟೆಯಾಡಲು ಬಂದ ಚಿರತೆಯನ್ನು ಅಟ್ಟಾಡಿಸಿಕೊಂಡು ಹೋಗಿ ಕೊಂದು ಹಾಕಿರುವ ಘಟನೆ ಕೇರಳದಲ್ಲಿ ನಡೆದಿದೆ. ಈ ಭೀಕರ ದೃಶ್ಯಾವಳಿಗಳನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಕೇರಳ ಕಾಲ್ ಪೆಟ್ಟಾದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಸ್ಥಳೀಯ ಗ್ರಾಮವೊಂದಕ್ಕೆ ನುಗ್ಗಿದ್ದ ಚಿರತೆ, ಅಲ್ಲಿನ ನಾಯಿಗಳ ಹಿಂಡಿನ ಮೇಲೆ ದಾಳಿ ಮಾಡಿ ನಾಯಿಯೊಂದನ್ನು ಎಳೆದುಕೊಂಡು ಹೋಗಲು ಯತ್ನಿಸಿದೆ. ಈ ವೇಳೆ ಚಿರತೆ ದಾಳಿಯ ತಿಳಿದ ಇತರೆ ನಾಯಿಗಳು ಜೋರಾಗಿ ಬೊಗಳಿವೆ. ನಾಯಿಗಳು ಬೊಗಳುತ್ತಿರುವ ಶಬ್ಧ ಕೇಳಿದ ಸ್ಥಳೀಯರೊಬ್ಬರು ಸ್ಥಳಕ್ಕೆ ದೌಡಾಸಿದಾಗ ಚಿರತೆಯೊಂದನ್ನು ನಾಯಿಗಳು ಸುತ್ತುವರೆದ ದೃಶ್ಯ ಕಂಡು ಹೌಹಾರಿದ್ದಾನೆ.
ಕೂಡಲೇ ತನ್ನ ಮೊಬೈಲ್ ತೆಗೆದು ಈ ನಾಯಿ ಮತ್ತು ಚಿರತೆಯ ಭೀಕರ ಕಾಳಗವನ್ನು ಚಿತ್ರೀಕರಿಸಿದ್ದಾನೆ. ನಾಯಿಗಳನ್ನು ಬೇಟೆಯಾಡಲು ಬಂದ ಚಿರತೆಯನ್ನು ಇಲ್ಲಿನ ಶ್ವಾನಗಳು ಸಂಘಟಿತ ಹೋರಾಟದ ಮೂಲಕ ಮಣಿಸಿವೆ. ಚಿರತೆಯನ್ನು ಸಿಕ್ಕ ಸಿಕ್ಕ ಕಡೆಯಲ್ಲೆಲಾ ಅಟ್ಟಾಡಿಸಿದ ಶ್ವಾನಸೇನೆ, ಚಿರತೆ ಮೇಲರಗಿ ಅದನ್ನು ಘಾಸಿಗೊಳಿಸಿವೆ. ಅಂತಿಮವಾಗಿ ಶ್ವಾನಗಳ ಸಂಘಟಿತ ಹೋರಾಟಕ್ಕೆ ಮಣಿದ ಚಿರತೆ, ತೀವ್ರವಾಗಿ ಗಾಯಗೊಂಡು ಅಲ್ಲಿಯೇ ಸಾವನ್ನಪ್ಪಿದೆ.
ಇನ್ನು ಇವಿಷ್ಟೂ ದೃಶ್ಯಾವಳಿಗಳನ್ನು ಚಿತ್ರೀಕರಿಸುತ್ತಿದ್ದ ವ್ಯಕ್ತಿ ಚಿರತೆಯನ್ನು ನಾಯಿಗಳ ದಾಳಿಯಿಂದ ರಕ್ಷಿಸಲು ಯತ್ನಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆದರೆ ಚಿರತೆ ತನ್ನ ಮೇಲೆ ದಾಳಿ ಮಾಡಬಹುದು ಎಂಬ ಭಯದಿಂದ ಆತನ ಪ್ರಯತ್ನವನ್ನು ತೀವ್ರಗೊಳಿಸಿಲ್ಲ. ಕೊನೆಗೆ ನಾಯಿಗಳು ಚಿರತೆಯನ್ನು ಕಚ್ಚಿ ಕಚ್ಚಿ ಕೊಂದು ಹಾಕಿವೆ. ಚಿರತೆ ಮತ್ತು ನಾಯಿ ದಾಳಿಯ ಈ ರೋಚಕ ದೃಶ್ಯಾವಳಿಗಳನ್ನು ಹತ್ತಿರದಿಂದ ಚಿತ್ರೀಕರಿಸಿರುವ ಆತನ ಧೈರ್ಯಕ್ಕೆ ಮೆಚ್ಚಲೇ ಬೇಕು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com