ನವದೆಹಲಿ: ತಡರಾತ್ರಿ ಮಹಿಳಾ ಪತ್ರಕರ್ತೆಯೊಬ್ಬರ ಮೇಲೆ ಅಪರಿಚಿತ ಪುರುಷರ ಗುಂಪು ಗುಂಡಿಕ್ಕಿ ಹತ್ಯೆಗೆ ಯತ್ನಿಸಿರುವ ಘಟನೆ ಪೂರ್ವ ದೆಹಲಿಯ ವಸುಂಧರಾ ಎನ್ಕ್ಲೇವ್ನಲ್ಲಿ ನಡೆದಿದೆ.
ಶನಿವಾರ ಮುಂಜಾನೆ 12:30ರ ವೇಳೆಗೆ ಪತ್ರಕರ್ತೆ ಮೈಥಿಲಿ ಚಾಂದೋಲಾ ತಮ್ಮ ಹ್ಯುಂಡೈ ಐ 20 ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಇನ್ನೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಪತ್ರಕರ್ತೆಯ ಕೈಗೆ ಗುಂಡು ತಗುಲಿ ಗಾಯಗಳಾಗಿದೆ.
ಸಧ್ಯ ಗಾಯಾಳು ಪತ್ರಕರ್ತೆಯನ್ನು ದೆಹಲಿಯ ಧರ್ಮಶಾಲಾ ಆಸ್ಪತ್ರೆಗೆ ದಾಖಲ್ಸಿಇದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಿಳೆ ಮೇಲೆ ಅಪರಿಚಿತರು ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಕೇವಲ ಎರಡು ಗುಂಡುಗಳು ಕಾರಿನ ಮುಂಭಾಗದ ವಿಂಡ್ ಷೀಲ್ಡ್ ಗೆ ತಾಕಿದೆ ಎಂದು ಪೋಲೀಸರು ಹೇಳಿದ್ದಾರೆ. ಇದೇ ವೇಳೆ ಹಲ್ಲೆಕೋರರು ಕಾರ್ ನ ಮೇಲೆ ಮೊಟ್ಟೆಗಳನ್ನು ಎಸೆದಿದ್ದರೆಂದು ಪತ್ರಕರ್ತೆ ಆರೋಪಿಸಿದ್ದಾರೆ.
ಪತ್ರಕರ್ತೆ ಚಾಂದೋಲಾ ನೋಯ್ಡಾದಲ್ಲಿ ವಾಸಿಸುತ್ತಿದ್ದು , ಪ್ರಸ್ತುತ ಟೆಲಿವಿಷನ್ ಚಾನೆಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ನ್ಯೂ ಅಶೋಕನಗರ ಠಾಣೆಯಲ್ಲಿ ಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.