ಸೆರೈಕೆಲಾ-ಖಾರ್ಸವಾನ್ (ಜಾರ್ಖಂಡ್): ಕಳ್ಳತನದ ಶಂಕೆ ಮೇಲೆ ಆಕ್ರೋಶಿತ ಗುಂಪಿನಿಂದ ಹಿಗ್ಗಾಮುಗ್ಗ ಥಳಿಸಿಕೊಂಡಿದ್ದ 24 ವರ್ಷದ ಯುವಕ ಮೃತಪಟ್ಟಿದ್ದು ಘಟನೆ ಸಂಬಂಧ 11 ಮಂದಿಯನ್ನು ಬಂಧಿಸಲಾಗಿದೆ.
ಜಾರ್ಖಂಡ್ ರಾಜ್ಯದ ಖಾರ್ಸಾವಾನ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಯುವಕನಿಗೆ ಥಳಿಸಿದ ಗುಂಪು ಒತ್ತಾಯಪೂರ್ವಕವಾಗಿ ಯುವಕನ ಕೈಯಲ್ಲಿ ಜೈ ಶ್ರೀರಾಮ್ ಮತ್ತು ಜೈ ಹನುಮಾನ್ ಎಂದು ಹೇಳಿಸುತ್ತಿರುವ ವಿಡಿಯೊ ಪೊಲೀಸರಿಗೆ ಸಿಕ್ಕಿದೆ. ಕಳೆದ 18 ರಂದು ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತೀವ್ರ ಹಲ್ಲೆಗೀಡಾಗಿದ್ದ 24 ವರ್ಷದ ತಬ್ರೇಜ್ ಅನ್ಸಾರಿಯನ್ನು ಜಾರ್ಖಂಡ್ ನ ಜಮ್ಷೆಡ್ ಪುರದಲ್ಲಿನ ಟಾಟಾ ಮೈನ್ ಆಸ್ಪತ್ರೆಗೆ ಕರೆತರುವಾಗ ಮೃತಪಟ್ಟಿದ್ದು ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ನೇಮಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಅವರು ಸಿನಿ ಮತ್ತು ಖಾರಸ್ವಾನ್ ಪೊಲೀಸ್ ಠಾಣೆಯ ಅಧಿಕಾರಿಗಳಾಗಿದ್ದಾರೆ.
ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ವಿಡಿಯೋದಲ್ಲಿ ತಬ್ರೇಜ್ ಗೆ ಮರದ ತುಂಡಿನಿಂದ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಮತ್ತೊಂದು ವಿಡಿಯೋದಲ್ಲಿ ಜೈ ರಾಮ್, ಜೈ ಹನುಮನ್ ಅಂತ ಹೇಳುವಂತೆ ಒತ್ತಾಯಿಸಲಾಗಿದೆ.