ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಖಂಡಿಸಿಲ್ಲ, ಹೀಗಿರುವಾಗ ಅವರನ್ನು ನಾವು ಹೇಗೆ ನಂಬುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ನವದೆಹಲಿಯ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಭಯೋತ್ಪಾದನೆಯ ಹಿಂದೆ ನಿಂತಿರುವವರಿಗೆ ಮೋದಿ ಸರ್ಕಾರ ಸಿಂಹಸ್ವಪ್ನದಂತಿದ್ದು, ಪಾಕ್ ಮೂಲದ ಭಯೋತ್ಪಾದಕರಿಗೆ ಭಯ ಮೂಡಿಸುತ್ತಿದೆ ಎಂದು ಹೇಳಿದ್ದಾರೆ.
ಸ್ವತಂತ್ರ್ಯ ನಂತರ ಭಾರತದಲ್ಲಿ ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ನಮ್ಮ ಸರ್ಕಾರ ಉತ್ತಮ ಟ್ರ್ಯಾಕ್ ರೆಕಾರ್ಡ್ ಮಾಡಿದೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಉಗ್ರರನ್ನು ನಾಶ ಮಾಡಲಾಗಿದೆ, ಆದರೆ ಪುಲ್ವಾಮ ಉಗ್ರರ ದಾಳಿಯನ್ನು ಪಾಕಿಸ್ತಾನ ಪ್ರಧಾನಿ ಏಕೆ ಖಂಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೊನೆ ಪಕ್ಷ ಕನಿಷ್ಠ ಒಂದು ಬಾರಿಯಾದರೂ ಪುಲ್ವಾಮ ದಾಳಿಯನ್ನು ಖಂಡಿಸಬೇಕಿತ್ತು, ಆದರೆ ಅದನ್ನು ಅವರು ಮಾಡಿಲ್ಲ, ಹೀಗಿರುವಾಗ ಅವರನ್ನು ನಾವು ಹೇಗೆ ನಂಬುವುದು, ಬಹುಶ ಪರಿಸ್ಥಿತಿ ಅವರ ನಿಯಂತ್ರಣದಲ್ಲಿಲ್ಲವೇನೋ ಎಂದು ಹೇಳಿದ್ದಾರೆ.