ಮಸೂದ್ ಅಜರ್ ಮೌಲಾನ ಅಲ್ಲ, ಪಾಕಿಸ್ತಾನದ ಉಗ್ರ ನಾಯಿ, ಮಾನವೀಯತೆಯ ಕೊಲೆಗಾರ; ಒವೈಸಿ
44 ಯೋಧರ ಸಾವಿಗೆ ಕಾರಣನಾದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮಾನವೀಯತೆಯ ಕೊಲೆಗಾರನಾಗಿದ್ದು, ಆತ ಮೌಲಾನ ಆಗಲು ಸಾಧ್ಯವೇ ಇಲ್ಲ ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಹೈದರಾಬಾದ್: 44 ಯೋಧರ ಸಾವಿಗೆ ಕಾರಣನಾದ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮಾನವೀಯತೆಯ ಕೊಲೆಗಾರನಾಗಿದ್ದು, ಆತ ಮೌಲಾನ ಆಗಲು ಸಾಧ್ಯವೇ ಇಲ್ಲ ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಹೈದರಾಬಾದ್ ನ ಸಿಕಂದರಾಬಾದ್ ನಲ್ಲಿ ಮಾತನಾಡಿದ ಒವೈಸಿ, 'ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್, ಮೌಲಾನಾ ಅಲ್ಲ, ಅವನೊಬ್ಬ ಮಾನವೀಯತೆಯ ಕೊಲೆಗಾರ. ಆತ ರಾಕ್ಷಸರ ನಾಯಿ ಎಂದು ಟೀಕಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ ಒವೈಸಿ, 'ಭಾರತದ ವಿರುದ್ಧ ಪಾಕ್ ಅಧ್ಯಕ್ಷ ಇಮ್ರಾನ್ ಖಾನ್ ಮುಸ್ಲಿಂ ಮತ್ತು ನ್ಯೂಕ್ಲಿಯರ್ ಕಾರ್ಡ್ ಗಳನ್ನು ಬಳಸುತ್ತಿದ್ದಾರೆ. ಇದು ಸರಿಯಲ್ಲ. ನಮ್ಮಲ್ಲಿ ಪರಮಾಣು ಬಾಂಬ್ ಇದೆ ಎಂಬೆಲ್ಲ ಬಾಲಿಶ ಹೇಳಿಕೆಗಳನ್ನು ಇಮ್ರಾನ್ ಖಾನ್ ಸಂಸತ್ತಿನಲ್ಲಿ ನೀಡುತ್ತಾರೆ? ನಮ್ಮ ಬಳಿ ಅದಿಲ್ಲವೇ? ನಮ್ಮ ದೇಶದ ಮುಸ್ಲಿಮರಿಗೂ ನಿಮ್ಮ ಬಗ್ಗೆ ಗೊತ್ತು. ಮೊದಲು ನಿಮ್ಮಲ್ಲಿರುವ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಇ ತೊಯ್ಬಾ ಮತ್ತು ಜೈಶ್ ಇ ಮೊಹಮದ್ ಗಳನ್ನು ನಾಶ ಮಾಡಿ. ನಂತರ ಭಾರತದ ಬಗ್ಗೆ ಮಾತನಾಡಿ' ಎಂದು ಓವೈಸಿ ಹೇಳಿದ್ದಾರೆ.
ಪಿಒಕೆಯಲ್ಲಿ ವಾಯುಸೇನೆ ದಾಳಿ: ಸೇನೆ ಮತ್ತು ಭಾರತ ಸರ್ಕಾರದ ಜೊತೆಗಿದ್ದೇವೆ
ಇದೇ ವೇಳೆ, ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಯನ್ನು ಸ್ವಾಗತಿಸಿದ್ದಾರೆ. 'ನಾವು ಭಾರತ ಸರ್ಕಾರ ಮತ್ತು ಭಾರತೀಯ ಸೇನೆ ಪರವಾಗಿದ್ದೇವೆ'. 'ಪುಲ್ವಾಮಾ ಘಟನೆ ನಡೆದ 2-3 ದಿನಗಳಲ್ಲಿಯೇ ಭಾರತ ಪಾಕಿಸ್ತಾನದ ವಿರುದ್ಧ ದಾಳಿ ನಡೆಸಬಹುದು ಎಂದು ನಾನು ನಿರೀಕ್ಷಿಸಿದ್ದೆ. ಈಗಲೂ ನಾವು ಭಾರತ ಸರ್ಕಾರದ ಪರವಾಗಿದ್ದೇವೆ. ಈಗ ಭಾರತ ಮೋಸ್ಟ್ ವಾಂಟೆಡ್ ಉಗ್ರರಾದ ಹಫೀಸ್ ಸೈಯ್ಯೀದ್ ಮತ್ತು ಮಸೂದ್ ಅಜರ್ ಅವರನ್ನು ಮುಗಿಸಲು ಪ್ರಯತ್ನಿಸಬೇಕು. ಒಂದು ದೇಶ ತನ್ನ ಸ್ವರಕ್ಷಣೆಗಾಗಿ ಶತ್ರು ರಾಷ್ಟ್ರದ ವಿರುದ್ಧ ಹೋರಾಡದೆ ಇದ್ದರೆ ಆ ದೇಶ ಅಸಮರ್ಥ ಎಂದೇ ಅರ್ಥವಾಗುತ್ತದೆ. ಆದ್ದರಿಂದ ಭಾರತದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.