ನವದೆಹಲಿ: ದೇಶದಲ್ಲಿರುವ ಎಲ್ಲಾ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳಿಸಿ, ಅಲ್ಲಿರುವ ಎಲ್ಲಾ ಹಿಂದೂಗಳನ್ನು ಭಾರತಕ್ಕೆ ಕರೆತರಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿದ್ದ ಪಿಐಎಲ್ ಅನ್ನು ಶುಕ್ರವಾರ ನ್ಯಾಯಾಲಯ ವಜಾ ಮಾಡಿದೆ.
ಸಂಗತ್ ಸಿಂಗ್ ಚೌಹಾಣ್ ಎಂಬಾತನೇ ಈ ವಿಚಿತ್ರ ಪಿಐಎಲ್ ಸಲ್ಲಿಸಿದ ವ್ಯಕ್ತಿ. ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್ ಹಾಗೂ ವಿನೀತ್ ಸರನ್ ಅವರನ್ನೊಳಗೊಂಡ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿತ್ತು.
ಈ ಅರ್ಜಿದಾರರ ಪರ ವಕೀಲರಿಗೆ ನ್ಯಾಯಮೂರ್ತಿಗಳು ಅರ್ಜಿದಾರರ ಮನವಿಯನ್ನು ಗಟ್ಟಿಯಾಗಿ ಓದಿ ಹೇಳಲು ಹೇಳಿದ್ದಾರೆ. ಆ ವಕೀಲ ಹಾಗೆ ಮಾಡಲು ನಾರಿಮನ್ ತಾವು ಅತ್ಯಂತ ಆಘಾತಗೊಂಡುದಲ್ಲದೆ "ಭಾರೀ ಖಂಡನೆ" ವ್ಯಕ್ತಪಡಿಸಿ "ಈ ಅರ್ಜಿಯನ್ನು ನೀವೇನಾದರೂ ಗಂಬೀರವಾಗಿ ಪರಿಗಣಿಸಿದ್ದೇ ಆದಲ್ಲಿ ನಾವು ವಿಚಾರಣೆಗೆ ಸಿದ್ದ, ಆದರೆ ಇದಕ್ಕಾಗಿ ನೀವು ಭಾರೀ ವೆಚ್ಚ ಭರಿಸಬೇಕಾಗುವುದು" ಎಂದಿದ್ದಾರೆ.
ನ್ಯಾಯಮೂರ್ತಿಗಳ ವಿವರಣೆ ಬಳಿಕ ಅರ್ಜಿದಾರನ ಪರ ವಕೀಲರು ತಾವಿದನ್ನು "ಗಂಭೀರವಾಗಿ" ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಆಗ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿದೆ.
ಹಲವಾರು ಅಪ್ರಯೋಜಕ ಪಿಐಎಲ್ ಗಳು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗುವುದು ಸಾಮಾನ್ಯವಾಗಿದ್ದು ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆಗೆ ಒಳಪಡುವ ಮುನ್ನ ನೋಂದಾವಣೆ ದೋಷಗಳನ್ನು ಪರಿಶೀಲಿಸಲಾಗುತದೆ. ಆದರೆ ಈ ಪಿಐಎಲ್ ಮಾತ್ರ ಕಣ್ತಪ್ಪಿನಿಂದ ನೇರವಾಗಿ ನ್ಯಾಯಮೂರ್ತಿಗಳ ಬಳಿ ಬಂದಿದೆ ಎಂದು ಹೇಳಲಾಗಿದೆ.