ಪಣಜಿ: ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಜನತೆಗಾಗಿ ದುಡಿದು ಇಹಲೋಕ ತ್ಯಜಿಸಿರುವ ಗೋವಾ ಸಿಎಂ ದಿ. ಮನೋಹರ್ ಪರಿಕ್ಕರ್ ಅವರು ತಮ್ಮ ಸರಳ ಸ್ವಭಾವದಿಂದಲೇ ಖ್ಯಾತರಾದವರು.
ಮನೋಹರ್ ಪರಿಕ್ಕರ್ ಅವರು ಸರಳ ಸ್ವಭಾವದವರು. ಅವರು ಎಂದಿಗೂ ಐಶ್ವರ್ಯ, ಸುಪ್ಪತ್ತಿಗೆಯನ್ನು ಹುಡುಕಿ ಹೋದವರಲ್ಲ. ಸರಳತೆಯ ಮೂರ್ತಿಯಂತಿದ್ದ ಪರಿಕ್ಕರ್ ಆಗಾಗ್ಗೆ ತಮ್ಮ ಸರಳತೆಯಿಂದಲೇ ಸುದ್ದಿಯಾಗುತ್ತಿದ್ದರು.
ಪರಿಕ್ಕರ್ ಅವರ ಸರಳತೆ ಕೆಲ ಮೆಲುಕುಗಳು ಇಲ್ಲಿವೆ.
ಪರಿಕ್ಕರ್ ಒಮ್ಮೆ ಟೀ ಕುಡಿಯಲು ಬೀದಿ ಬದಿಯ ಚಹಾ ಅಂಗಡಿಗೆ ಬಂದಿದ್ದರು. ರಕ್ಷಣಾ ಸಚಿವರಾಗಿದ್ದಾಗಲೇ ಪರಿಕ್ಕರ್ ಅವರು ಈ ರೀತಿ ನಡೆದುಕೊಂಡಿದ್ದು ಅಕ್ಷರಶಃ ಜನರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿಬಿಟ್ಟಿತ್ತು.
ಸೈಕಲ್ ಸವಾರಿ: ಪರಿಕ್ಕರ್ ಅವರು ಒಮ್ಮೆ ಶಾಲೆಗೆ ಭೇಟಿ ನೀಡಿದ್ದಾಗ ವಿದ್ಯಾರ್ಥಿಯೊಬ್ಬನ ಸೈಕಲ್ ತುಳಿದು ತಮ್ಮ ಬಾಲ್ಯದ ಘಟನೆಗಳ ನೆನೆದು ಸಂಭ್ರಮಿಸಿದ್ದರು. ಆ ಬಳಿಕ ಪರಿಕ್ಕರ್ ಅವರ ಸೈಕಲ್ ಸವಾರಿ ಕೂಡ ಸುದ್ದಿಯಾಗಿತ್ತು.
ಬೈಕ್ ಸುತ್ತಾಟ: ಪರಿಕ್ಕರ್ ಅವರಿಗೆ ಅಪಾರ ಮಿತ್ರರು. ಒಮ್ಮೆ ಬೈಕ್ ರಾಲಿ ನಡೆಯುವಾಗ ಸಿಎಂ ಸ್ಥಾನದಲ್ಲಿದ್ದ ಪರಿಕ್ಕರ್ ಅವರೇ ಸ್ನೇಹಿತನ ಬೈಕ್ನಲ್ಲಿ ಸುತ್ತಾಡಿದ್ದರು.
ಮತದಾನಕ್ಕೆ ಕ್ಯೂ: ಪರಿಕ್ಕರ್ ಅವರು ಮತ ಹಾಕುವ ಸಂದರ್ಬದಲ್ಲಿ ಸಾಮಾನ್ಯರಂತೆ ಕ್ಯೂನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದರು.
ವಧುವರರಿಗೆ ಗಿಫ್ಟ್ ಕೊಡಲು ಬಂದರು: ಪರಿಕ್ಕರ್ ಅವರು ತಮ್ಮ ಸ್ನೇಹಿತರೊಬ್ಬರ ಮಗನ ಮದುವೆಗೆ ಬಂದಿದ್ದಾಗ ಇತರರಂತೆ ತಾವೂ ಕೂಡ ಕ್ಯೂನಲ್ಲಿ ನಿಂತು ಬಂದು ಒಂದು ಗಿಫ್ಟ್ ಕೊಟ್ಟಿದ್ದರು.