ಕೋಲ್ಕತಾ: ದೇಶದ ಸಂವಿಧಾನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಗೌರವ ತೋರಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಮ್ಮನ್ನು ದೇಶದ ಪ್ರಧಾನಿ ಎಂದು ಒಪ್ಪಿಕೊಳ್ಳಲು ಮಮತಾ ಬ್ಯಾನರ್ಜಿ ಸಿದ್ಧರಿಲ್ಲ. ಈ ಮೂಲಕ ಅವರು ಸಂವಿಧಾನಕ್ಕೆ, ಒಕ್ಕೂಟ ವ್ಯವಸ್ಥೆಗೆ ಕಳಂಕ ತಂದಿದ್ದಾರೆ ಎಂದು ದೂರಿದರು.
ಫೋನಿ ಚಂಡಮಾರುತ ಸಂತ್ರಸ್ತರಿಗಾಗಿ ನೆರವು ನೀಡಲು ಎರಡು ಬಾರಿ ಮಮತಾ ಅವರಿಗೆ ಕರೆ ಮಾಡಿದ್ದರೂ ಅವರು ಸೌಜನ್ಯಕ್ಕಾದರೂ ಮತ್ತೆ ಕರೆ ಮಾಡಲಿಲ್ಲ. ಈ ಮೂಲಕ ತಮ್ಮನ್ನು ಪ್ರಧಾನಿ ಎಂದು ಒಪ್ಪಿಕೊಳ್ಳಲು ಮಮತಾ ಸಿದ್ಧರಾಗಿಲ್ಲ ಎಂದು ಮೋದಿ ಅಸಮಾಧಾನ ವ್ಯಕ್ತಪಡಿಸಿದರು