ಮುಂಗಾರು ಐದು ದಿನ ವಿಳಂಬ, ಜೂನ್‌ 6ರಂದು ಕೇರಳ ಪ್ರವೇಶ

ಈ ಬಾರಿ ಮುಂಗಾರು ಐದು ದಿನ ವಿಳಂಬವಾಗುತ್ತಿದ್ದು, ಜೂನ್ 6ರಂದು ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಬುಧವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಈ ಬಾರಿ ಮುಂಗಾರು ಐದು ದಿನ ವಿಳಂಬವಾಗುತ್ತಿದ್ದು, ಜೂನ್ 6ರಂದು ಕೇರಳ  ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಬುಧವಾರ ತಿಳಿಸಿದೆ.
ಸಾಮಾನ್ಯವಾಗಿ ಮುಂಗಾರು ಮಳೆ ಜೂನ್‌ 1ರಂದು ಕೇರಳ ಕರಾವಳಿ ಪ್ರವೇಶಿಸುತ್ತದೆ ಮತ್ತು ಜುಲೈ ಮಧ್ಯದೊಳಗೆ ಇಡೀ ದೇಶವನ್ನು ವ್ಯಾಪಿಸುತ್ತದೆ. ಆದರೆ ಈ ವರ್ಷ ಮುಂಗಾರು ಸ್ವಲ್ಪ ವಿಳಂಬವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಂಡಮಾನ್‌ ಸಮುದ್ರದ ದಕ್ಷಿಣ ಭಾಗ, ನಿಕೋಬಾರ್‌ ದ್ವೀಪಗಳು ಮತ್ತು ಆದಕ್ಕೆ ತಾಗಿಕೊಂಡಿರುವ ಆಗ್ನೇಯ ಬಂಗಾಲ ಕೊಲ್ಲಿಯ ಮೇಲೆ ಮುಂಗಾರು ಮಾರುತಗಳು ಸಾಗಿ ಬರುವುದಕ್ಕೆ ಮೇ 18 – 19ರ ಸುಮಾರಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನಿನ್ನೆಯಷ್ಟೇ ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಹೇಳಿತ್ತು.
2019ರಲ್ಲಿ ದೇಶದಲ್ಲಿ ದೀರ್ಘಾವಧಿ ಸರಾಸರಿ ಶೇ. 93ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್‌ ಪ್ರಕಟಣೆಯಲ್ಲಿ ತಿಳಿಸಿತ್ತು.
ಫೋನಿ ಚಂಡಮಾರುತ ಸೇರಿದಂತೆ ಮತ್ತಿತರ ಹವಾಮಾನ ಬದಲಾವಣೆ ಕಾರಣಗಳಿಂದಾಗಿ ಈ ಬಾರಿ ರಾಜ್ಯಕ್ಕೂ ಮುಂಗಾರು ಆಗಮನ ವಿಳಂಬವಾಗಲಿದ್ದು, ವಾರ್ಷಿಕ ಮಳೆಯಲ್ಲೂ ಕೊರತೆ ಉಂಟಾಗುವ ಆತಂಕ ಎದುರಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com