ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ದಿನ ದಿನಕ್ಕೆ ಉಲ್ಬಣವಾಗುತ್ತಿದ್ದು ಶಿವಸೇನೆ ಹಾಗೂ ಬಿಜೆಪಿ ನಡುವಿನ ಸಂಧಾನ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದಾಗಿ ಬಿಜೆಪಿ ಬೆದರಿಕೆ ಒಡ್ಡಿದೆ. ಇತ್ತ ಶಿವಸೇನೆ ತಾನು ಬಹುಮತ ಸಾಬೀತಿಗೆ ಅಗತ್ಯವಾಗಿರುವ ಸಂಖ್ಯೆಯ ಶಾಸಕರನ್ನು ಒಟ್ಟುಗೂಡಿಸಲು ಪ್ರಯತ್ನ ಮುಂದುವರಿಸಿದ್ದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ದೂರವಾಣಿ ಸಂಬಾಷಣೆ ನಡೆಸಿದ್ದಾರೆ. ಇನ್ನು ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಶಿವಸೇನೆಯನ್ನು ಬೆಂಬಲಿಸಲು ಕುರಿತು ಕಾಂಗ್ರೆಸ್ ಪಾಳಯದಲ್ಲಿ ಸಹ ವಿಭಿನ್ನ ನಿಲುವುಗಳು ತೋರಿಬಂದಿದೆ.
ಶುಕ್ರವಾರ ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆ ದೂರವಾಣಿ ಸಂಭಾಷಣೆ ನಡೆಸಿದ್ದು ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಸಾಧ್ಯತೆಗಳನ್ನು ಅನ್ವೇಷಿಸಲು ಶೀಘ್ರದಲ್ಲೇ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ 2014 ರಲ್ಲಿ ಸಹ ಪ್ರಾರಂಭದಲ್ಲಿ ಶಿವಸೇನೆ ಬೆಂಬಲ ಪಡೆಯದೆ ಅಲ್ಪಬಲದ ಸರ್ಕಾರ ರಚನೆ ಮಾದಿತ್ತು. ಅದಾಗಿ ಒಂದ್ಯು ತಿಂಗಳ ನಂತರ ಶಿವಸೇನೆ ಮನವೊಲಿಸಿ ಸರ್ಕಾರಕ್ಕೆ ಸೇರ್ಪಡೆ ಮಾಡಿಕೊಂಡಿತ್ತು.ಸಿಎಂ ಅಧಿಕೃತ ನಿವಾಸ ವರ್ಷಾ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಿಜೆಪಿ ನಾಯಕರ ಸರಣಿ ಸಭೆಗಳನ್ನು ನಡೆಸಲಾಗಿದೆಯಾದರೂ ಸೇನೆ ಜತೆಗಿನ ಮೈತ್ರಿ ಕುರಿತಂತೆ ಇನ್ನೂ ಸ್ಪಷ್ಟ ನಿಲುವು ತಾಳಿಲ್ಲ. ಈ ನಡುವೆ ಭರ್ಜರಿ ಪ್ರಮಾಣವಚನ ಸಮಾರಂಭಕ್ಕಾಗಿ ವಾಂಖೆಡೆ ಕ್ರೀಡಾಂಗಣವನ್ನು ಈಗಾಗಲೇ ಮುಂದಿನ ವಾರ ಎರಡು ದಿನಗಳವರೆಗೆ ಕಾಯ್ದಿರಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹೀಗಿದ್ದರೂ ಒಂದೊಮ್ಮೆ ಬಿಜೆಪಿ ಏಕಾಂಗಿಯಾಗಿ ಸರ್ಕಾರ ರಚನೆ ಮಾಡಿ ಮುಖ್ಯಮಂತ್ರಿ ಪ್ರಮಾಣ ವಚನ ನೆರವೇರಿದರೂ ವಿಧಾನಸಭೆಯಲ್ಲಿ ಸ್ಪೀಕರ್ ಆಯ್ಕೆ ಹಾಗೂ ಅಧಿವೇಶನದಲ್ಲಿ ವಿಶ್ವಾಸಮತ ಸಾಬೀತುಪಡಿಸಲು ಕಮಲ ಪಕ್ಷಕ್ಕೆ ಸಂಕಟ ಎದುರಾಗುವುದು ಖಚಿತ. ವಿಧಾನಸಭೆಯ ಸ್ಪೀಕರ್ ಚುನಾವಣೆಯ ಸಂದರ್ಭದಲ್ಲಿ ಶಿವಸೇನೆ ಬಿಜೆಪಿಯನ್ನು ಮೂಲೆಗುಂಪು ಮಾಡಲು ತಯಾರಿ ನಡೆಸುತ್ತಿದೆ.2014ರಲ್ಲಿ ಸ್ಪೀಕರ್ ಚುನಾವಣೆ ವೇಳೆಗೆ ಎನ್ಸಿಪಿ ಬಿಜೆಪಿಗೆ ಬೆಂಬಲಿಸಿತ್ತು. ಆದರೆ ಈ ಬಾರಿ ಹಾಗಾಗುವ ಸಾಧ್ಯತೆ ಇಲ್ಲ. ಏಕೆಂದರೆ ಎನ್ಸಿಪಿ ಮತ್ತು ಕಾಂಗ್ರೆಸ್ ಜತೆಯಾಗಿ ಬಿಜೆಪಿಯನ್ನು ವಿರೋಧಿಸಿದೆ.
ಇನ್ನು ಸಧ್ಯದ ಬಿಕ್ಕಟ್ಟಿನಿಂದ ಹಿರಬರಲು ಸ್ಪೀಕರ್ ಹುದ್ದೆಯನ್ನು ಶಿವಸೇನೆಗೆ ನೀಡುವ ಬಗ್ಗೆ ಬಿಜೆಪಿ ಯೋಚಿಸಬಹುದು. ಆದರೆ ಆ ಕೊಡುಗೆಯನ್ನು ಶಿಅವ್ಸೇನೆ ಒಪ್ಪಿಕೊಳ್ಳುತ್ತದೆ ಎಂದು ಹೇಳಲು ಬರುವುದಿಲ್ಲ ಎಂದು ಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.ನವೆಂಬರ್ 7 ರೊಳಗೆ ಹೊಸ ವಿಧಾನಸಭೆ ಜಾರಿಗೆ ಬರಬೇಕಿದೆ. ಹಾಗಾಗದೆ ಹೋದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ ಎಂದು ಮಹಾರಾಷ್ಟ್ರ ಹಣಕಾಸು ಸಚಿವ ಮತ್ತು ಬಿಜೆಪಿ ಮುಖಂಡ ಸುಧೀರ್ ಮುಂಗಂತಿವರ್ ಹೇಳೀದ್ದಾರೆ.
ಹಿರಿಯ ಸಾಂವಿಧಾನಿಕ ತಜ್ಞ ಉಲ್ಹಾಸ್ ಬಾಪಟ್ ಪ್ರಕಾರ ಯಾವುದೇ ಪಕ್ಷಗಳು ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ “ರಾಜ್ಯ ಕಾರ್ಯಚಟುವಟಿಕೆಯ ವೈಫಲ್ಯ” ಎಂಬ ನಿಲುವಿನಡಿ ರಾಷ್ಟ್ರಪತಿ ಆಡಳಿತ ಹೇರಲು ರಾಜ್ಯಪಾಲರು ಶಿಫಾರಸು ಮಾಡಬಹುದು.
ಈ ಮಧ್ಯೆ, ಶಿವಸೇನೆ ಸಂಸದ ಸಂಜಯ್ ರಾವತ್ ಮಾತ್ರ ರಾಷ್ಟ್ರಪತಿ ಆಳ್ವಿಕೆ ಜಾರಿಯ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.ಅಗತ್ಯವಿದ್ದಲ್ಲಿ ತಮ್ಮ ಪಕ್ಷವು ಬಹುಮತವನ್ನು ಸಾಬೀತುಪಡಿಸಲು ಸಂಖ್ಯೆಗಳನ್ನು ಸಂಗ್ರಹಿಸಲಿದೆಎಂದು ಹೇಳಿದರು. ಇನ್ನು ಎನ್ಸಿಪಿಯ ನವಾಬ್ ಮಲಿಕ್ ಶಿವಸೇನೆಯ ಕಲ್ಪನೆಯನ್ನು ಬೆಂಬಲಿಸಿದರು ಮತ್ತು ಸರ್ಕಾರ ರಚನೆಗೆ ಮುಂದಾಗಲು ನಿರ್ಧರಿಸಿದರೆ, ಎನ್ಸಿಪಿ ಅದನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.ಆದರೆ, ಈ ವಿಷಯದ ಬಗ್ಗೆ ಕಾಂಗ್ರೆಸ್ ನಾಯಕರು ಮಾತ್ರ ವಿಭಿನ್ನ ನಿಲುವನ್ನು ಹೊಂದಿದ್ದಾರೆ.ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರತ್, ಮಹಾರಾಷ್ಟ್ರದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಖರ್ಗೆ ಮತ್ತು ಮುಂಬೈ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂಜಯ್ ನಿರುಪಮ್ ಅವರು ಸರ್ಕಾರ ರಚಿಸಲು ಶಿವಸೇನೆಗೆ ಬೆಂಬಲ ನೀಡುವ ವಿಚಾರವನ್ನು ವಿರೋಧಿಸಿದರು.
ಆದರೆ, ಮಾಜಿ ಮುಖ್ಯಮಂತ್ರಿಗಳಾದ ಪೃಥ್ವಿರಾಜ್ ಚೌಹಾಣ್, ಅಶೋಕ್ ಚೌಹಾಣ್, ಇತರ ಕೆಲವು ನಾಯಕರು ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರದಿಂದ ದೂರವಿರಿಸಲು ಶಿವಸೇನೆಗೆ ಬೆಂಬಲ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶಿವಸೇನೆಗೆ ಬೆಂಬಲ ನೀಡುವಂತೆ ಮನವೊಲಿಸಲು ಕೆಲವು ಪಕ್ಷದ ಮುಖಂಡರು ದೆಹಲಿಯನ್ನು ತಲುಪಿದ್ದಾರೆ.
ಈ ನಡುವೆ ಕಾಂಗ್ರೆಸ್ ಜೊತೆ ಹೋಗುವ ಸಾಧ್ಯತೆಯನ್ನು ನಿರಾಕರಿಸಿದ ರಾವತ್ "ಪಕ್ಷದ ಶಾಸಕರ ಸಭೆಯಲ್ಲಿ ಉದ್ಧವ್ ಠಾಕ್ರೆ ಆ ರೀತಿಯ ಯಾವ ನಿರ್ಧಾರದ ಕುರಿತು ಪ್ರಸ್ತಾಪಿಸಿಲ್ಲ"ಎಂದು ಹೇಳಿದರು. ವಿವಿಧ ಹಂತಗಳಲ್ಲಿ ಮಾತುಕತೆ ನಡೆಯುತ್ತಿದ್ದರೂ, ಸಹ ಠಾಕ್ರೆ ನಿಲುವಿಗೆ ಎಲ್ಲರೂ ಬದ್ದವಾಗಿರುವ ಕಾರಣ ಶಿವಸೇನಾ ನಾಯಕ "ಬಹುಮತವಿಲ್ಲದವರು ಸರ್ಕಾರ ರಚಿಸಲು ಧೈರ್ಯ ಮಾಡಬಾರದು” ಎಂದು ಎಚ್ಚರಿಸಿದ್ದಾರೆ.
Advertisement