ನವದೆಹಲಿ: ದೆಹಲಿ-ಎನ್ಸಿಆರ್ ಯಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟದಿಂದ ಮಾರಕ ಮಟ್ಟವನ್ನು ತಲುಪಿದ್ದು, ಇಂದಿನಿಂದಲೇ ದೆಹಲಿ ಸರ್ಕಾರ ಸಮ-ಬೆಸ ಸಂಖ್ಯೆ ಯೋಜನೆಯನ್ನು ಮತ್ತೆ ಜಾರಿಗೆ ತಂದಿದೆ.
ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ ಭಾನುವಾರ ಮಳೆ ಸುರಿದ ನಂತರ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದ್ದು, ದಟ್ಟ ಹೊಗೆ ಮತ್ತು ಕಡಿಮೆ ಗೋಚರತೆಯಿಂದಾಗಿ ಸಂಚಾರ ಅಸ್ಥವ್ಯಸ್ಥಗೊಂಡಿದೆ. ಇನ್ನು ಖಾಸಗಿ ಹವಾಮಾನ ವೆಬ್ ಸೈಟ್ aqicn.org ನೀಡಿರುವ ವರದಿ ಅನ್ವಯ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 999ಕ್ಕೆ ತಲುಪಿದ್ದು, ಇದು ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಗರಿಷ್ಠ ಮಟ್ಟದ್ದು ಎಂದು ಹೇಳಲಾಗಿದೆ. ಇನ್ನು ದೆಹಲಿಯ ಪೂಸಾದಲ್ಲಿ AQI 994, ಸತ್ಯವತಿ ಕಾಲೇಜಿನಲ್ಲಿ AQI 999, ಐಟಿಐ ಜಹಾಂಗೀರ್ಪುರಿಯಲ್ಲಿ AQI 999 ಮತ್ತು ಸೋನಿಯಾ ವಿಹಾರ್ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್ನಲ್ಲಿ AQI 999 ಇತ್ತು ಎನ್ನಲಾಗಿದೆ.
ವಿಮಾನಗಳ ಸಂಚಾರದಲ್ಲೂ ತೀವ್ರ ಅಸ್ಥವ್ಯಸ್ಥ
ಭಾನುವಾರ ಬೆಳಿಗ್ಗೆ ದೆಹಲಿಯಲ್ಲಿ ಮಳೆಯಿಂದಾಗಿ ಮಾಲಿನ್ಯ ಕಡಿಮೆಯಾಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ತಜ್ಞರ ಊಹೆಗಳು ತಲೆಕೆಳಗಾಗಿದ್ದು, ಮಾಲಿನ್ಯ ಮಟ್ಟ ಇನ್ನೂ ಹೆಚ್ಚಾಗಿದೆ. ಪರಿಣಾಮ ದೆಹಲಿಯಲ್ಲಿ ವಿಮಾನ ಸಂಚಾರ ಕೂಡ ಅಸ್ತವ್ಯಸ್ಥಗೊಂಡಿದೆ. ಮೂಲಗಳ ಪ್ರಕಾರ 32 ವಿಮಾನಗಳ ಮಾರ್ಗ ಬದಲಿಸಲಾಗಿದೆ.
ದೆಹಲಿಯ ಎಲ್ಲಾ ಶಾಲೆಗಳನ್ನು ನವೆಂಬರ್ 5 ರೊಳಗೆ ಮುಚ್ಚುವಂತೆ ದೆಹಲಿ ಸರ್ಕಾರ ಶುಕ್ರವಾರ ಆದೇಶಿಸಿದೆ. ಇದಲ್ಲದೆ, ದೆಹಲಿ ಸರ್ಕಾರವು ನವೆಂಬರ್ 4 ರಿಂದ ನವೆಂಬರ್ 15 ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ವಾಹನಗಳ ಆಡ್-ಈವ್ ಯೋಜನೆಯನ್ನು ಜಾರಿಗೆ ತರಲು ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
Advertisement