ಚೆನ್ನೈ: ಪಾಲಿಟೆಕ್ನಿಕ್ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಸ್ನೇಹಿತ

19 ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿಯನ್ನು ಆತನ ಸ್ನೇಹಿತನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕಂಚಿಪುರಂ ಜಿಲ್ಲೆಯ ತಲಂಬುರ್ ಸಮೀಪ ಮಂಗಳವಾರ ನಡೆದಿದೆ.
ಮುಕೇಶ್
ಮುಕೇಶ್

ಚೆನ್ನೈ: 19 ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿಯನ್ನು ಆತನ ಸ್ನೇಹಿತನೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕಂಚಿಪುರಂ ಜಿಲ್ಲೆಯ ತಲಂಬುರ್ ಸಮೀಪ ಮಂಗಳವಾರ ನಡೆದಿದೆ.

ಹತ್ಯೆಯಾದ ವಿದ್ಯಾರ್ಥಿಯನ್ನು ವಂದಲೂರಿನ ಖಾಸಗಿ ಪಾಲಿಟೆಕ್ನಿಕ್ ಕಾಲೇಜ್ ನ ಮುಕೇಶ್ ಎಂದು ಗುರುತಿಸಲಾಗಿದ್ದು, ಕೇಳಂಬಾಕಂ ನಿವಾಸಿ ಎನ್ನಲಾಗಿದೆ.

ಮುಖೇಶ್ ಇಂದು ಬೆಳಗ್ಗೆ 10.45ರ ಸುಮಾರಿಗೆ ಕೇಳಂಬಾಕಂನ ಬರ್ಕವಿ ಅವೆನ್ಯೂನಲ್ಲಿರುವ ತನ್ನ ಸ್ನೇಹಿತ ವಿಜಯ್(20) ಭೇಟಿ ಮಾಡಲು ತೆರಳಿದ್ದ. ಈ ವೇಳೆ ವಿಜಯ್ ಮತ್ತು ಮುಕೇಶ್ ನಡುವೆ ಜಗಳವಾಗಿದ್ದು, ವಿಜಯ್ ನಾಡ ಪಿಸ್ತೂಲ್ ನಿಂದ ಮುಖೇಶ್ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿ ಮನೆಯ ಹೊರಗಡೆ ಇದ್ದ ವಿಜಯ್ ಸಹೋದರ ಉದಯ್ ಕೂಡಲೇ ಮನೆ ಒಳಗೆ ಬಂದಿದ್ದಾರೆ. ಈ ವೇಳೆ ರಕ್ತದ ಮೊಡುವಿನಲ್ಲಿ ಬಿದ್ದಿದ್ದ ಮುಖೇಶ್ ನನ್ನು ನೋಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯ್ ಮನೆಗೆ ಧಾವಿಸಿಬಂದ ನೆರೆಯವರು ಮುಕೇಶ್ ನನ್ನು ಕೂಡಲೇ ಟ್ಯಾಗೋರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮುಖೇಶ್ ದಾರಿಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸ್ಥಳಕ್ಕೆ ಮಹಾಮಲ್ಲಾಪುರಂ ಪೊಲೀಸ್ ವರಿಷ್ಠಾಧಿಕಾರಿ ಬದ್ರಿ ನಾರಾಯಣ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಜಯ್ ಮತ್ತು ಉದಯ್ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ವಿಜಯ್ ಖಾಸಗಿ ಕಂಪನಿಯಲ್ಲಿ ಫೂಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಬದ್ರಿ ನಾರಾಯಣ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com