ರಾಜಕೀಯ ಕೈದಿಗಳ ಬಿಡುಗಡೆ ಮಾಡಿ, ಕಾಶ್ಮೀರ ಸಹಜಸ್ಥಿತಿಗೆ ತನ್ನಿ: ನ್ಯಾಷನಲ್ ಕಾನ್ಫರೆನ್ಸ್

ವಿಧಿ 370ರ ರದ್ಧತಿ ಬಳಿಕ ಉಂಟಾದ ಪ್ರತಿಭಟನೆಗಳಲ್ಲಿ ಬಂಧಿಸಲ್ಪಟ್ಟಿರುವ ರಾಜಕೀಯ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಿ ಕಾಶ್ಮೀರವನ್ನು ಸಹಜಸ್ಛಿತಿಗೆ ತರುವಂತೆ ನ್ಯಾಷನಲ್ ಕಾನ್ಫರೆನ್ಸ್ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ವಿಧಿ 370ರ ರದ್ಧತಿ ಬಳಿಕ ಉಂಟಾದ ಪ್ರತಿಭಟನೆಗಳಲ್ಲಿ ಬಂಧಿಸಲ್ಪಟ್ಟಿರುವ ರಾಜಕೀಯ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಿ ಕಾಶ್ಮೀರವನ್ನು ಸಹಜಸ್ಛಿತಿಗೆ ತರುವಂತೆ ನ್ಯಾಷನಲ್ ಕಾನ್ಫರೆನ್ಸ್ ಹೇಳಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ, ವಿಧಿ 370ರ ರದ್ಧತಿ ಬಳಿಕ ಬಂಧಿಸಲಾಗಿರುವ ಎಲ್ಲ ರಾಜಕೀಯ ನಾಯಕರುಗಳನ್ನು ಮತ್ತು ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಆ ಮೂಲಕ ಕಾಶ್ಮೀರದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಬೇಕು ಎಂದು ಹೇಳಿದೆ.

ಅಲ್ಲದೆ ಈ ಹಿಂದಿನಂತೆ ರಾಜಕೀಯ ಚಟುವಟಿಕೆಗಳಿಗೆ ಆಸ್ಪದ ನೀಡಬೇಕು ಎಂದೂ ಎನ್ ಸಿ ಆಗ್ರಹಿಸಿದೆ. ಇಂದಿಗೆ ಅಂದರೆ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ನೀಡುವ ವಿಧಿ 370ನ್ನು ರದ್ದು ಮಾಡಿ 3 ತಿಂಗಳಾಗಿದ್ದು, ಈ ವರೆಗೂ ಕಾಶ್ಮೀರ ಸಹಜ ಸ್ಥಿತಿಗೆ ಬಂದಿಲ್ಲ. ರಾಜ್ಯದಲ್ಲಿ ಸಂವಹನ ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಕಿತ್ತುಕೊಳ್ಳಲಾಗಿದೆ. ಇಂದಿಗೂ ಅಮಾಯಕ ನಾಗರೀಕರನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಲಾಗುತ್ತಿದೆ. ರಾಜ್ಯದ ಹೊರಗಿನ ಜೈಲುಗಳಲ್ಲಿ ಇಂದಿಗೂ ಹಲವು ಕಾಶ್ಮೀರಿ ಯುವಕರನ್ನು ಬಂಧಿಸಿಡಲಾಗಿದೆ. ಇದು ಸಹಿಸಲಸಾಧ್ಯ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಎನ್ ಸಿ ಆಗ್ರಹಿಸಿದೆ.

ಅಲ್ಲದೆ ಕಣಿವೆಯಲ್ಲಿ ಮತ್ತೆ ರಾಜಕೀಯ ಚುಟುವಟಿಕೆಗಳು ಪುನಾರಂಭಕ್ಕೆ ಅವಕಾಶ ಮಾಡಿಕೊಡಬೇಕು. ಇದಕ್ಕಾಗಿ ಗೃಹ ಬಂಧನದಲ್ಲಿರಿಸಲಾಗಿರುವ ಎಲ್ಲ ರಾಜಕೀಯ ನಾಯಕರನ್ನು ಬಿಡುಗಡೆ ಮಾಡಬೇಕು ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com