ಮುಂಬೈ: ತಮ್ಮನ್ನು ಸುಳ್ಳುಗಾರ ಎಂದು ಕರೆದ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಉಪಸ್ಥಿತಿಯಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಯ ಭರವಸೆ ನೀಡಲಾಗಿತ್ತು ಎಂದು ಶುಕ್ರವಾರ ಹೇಳಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಉದ್ಧವ್ ಠಾಕ್ರೆ ಅವರು, ಮುಖ್ಯಮಂತ್ರಿ ಹುದ್ದೆಯನ್ನು ಎರಡೂವರೆ ವರ್ಷಗಳಿಗೆ ಹಂಚಿಕೊಳ್ಳುವ ಒಪ್ಪಂದ ಆಗಿರಲಿಲ್ಲ ಎಂಬ ಫಡ್ನವಿಸ್ ಹೇಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲ ಬಾರಿಗೆ ಠಾಕ್ರೆ ಕುಟುಂಬದ ವ್ಯಕ್ತಿಯನ್ನು ಸುಳ್ಳುಗಾರ ಎಂದು ಕರೆದಿದ್ದಾರೆ. ಆದರೆ ಮಹಾರಾಷ್ಟ್ರದ ಜನರಿಗೆ ಬಾಳಾ ಸಾಹೇಬ್ ಠಾಕ್ರೆ ಪುತ್ರ ಸುಳ್ಳು ಹೇಳುತ್ತಿದ್ದಾನೆ ಎಂಬುದಾಗಿ ಮುಖ್ಯಮಂತ್ರಿಗಳು ಹೇಳುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಮತ್ತೊಮ್ಮೆ ನನ್ನನ್ನು ಸುಳ್ಳುಗಾರ ಎಂದು ಜರಿದರೆ ಬಿಜೆಪಿ ಸಖ್ಯವನ್ನೇ ತೊರೆಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಶಿವಸೇನಾ ಶಾಸಕನನ್ನೇ ಮುಖ್ಯಮಂತ್ರಿ ಮಾಡುವುದಾಗಿ ನಾನು ಜನರಿಗೆ ಮಾತು ಕೊಟ್ಟಿದ್ದೆ. ಬಿಜೆಪಿ ಮತ್ತು ಶಿವಸೇನಾ 25 ವರ್ಷಗಳಿಂದ ಜತೆಯಾಗಿವೆ. ಅಧಿಕಾರದಲ್ಲಿ ಸಮಾನ ಪಾಲು ನಿರೀಕ್ಷಿಸುತ್ತಿರುವುದಾಗಿ ದೇವೇಂದ್ರ ಫಡ್ನಿವಿಸ್ ಮತ್ತು ಅಮಿತ್ ಶಾ ಅವರ ಬಳಿ ಹೇಳಿದ್ದೆ ಮತ್ತು ಇದಕ್ಕೆ ಅವರು ಒಪ್ಪಿದ್ದರು ಎಂದರು.
Advertisement