ಚೆನ್ನೈ: ಬಿಜೆಪಿ ಪಕ್ಷ ಸೇರ್ಪಡೆಗೆ ಸಂಬಂಧಿಸಿದಂತೆ ಯಾವುದೇ ಆಹ್ವಾನ ಬಂದಿಲ್ಲ. ಆದರೆ, ಆ ಪಕ್ಷದ ಸೈದ್ದಾಂತಿಕ ಬಣ್ಣದೊಂದಿಗೆ ತಮ್ಮಗೂ ಕೇಸರಿ ಬಣ್ಣ ಕಟ್ಟುವ ಪ್ರಯತ್ನ ನಡೆದಿದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಇತ್ತೀಚಿಗೆ ತಮಿಳಿನ ಸಂತ ಕವಿ ತಿರುವಳ್ಳುವರ್ ಪ್ರತಿಮೆಗೆ ಕೇಸರಿಕರಣಗೊಳಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸೂಪರ್ ಸ್ಟಾರ್ ರಜನಿಕಾಂತ್, ತಿರುವಳ್ಳುವರ್ ಜೊತೆಗೆ ತಮ್ಮನ್ನು ಕೇಸರಿಕರಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಇತ್ತೀಚಿಗೆ ಬಿಜೆಪಿ ಮುಖಂಡ ರಾಧಾಕೃಷ್ಣನ್ ಜೊತೆಗಿನ ಸಭೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಜನಿಕಾಂತ್, ಬಿಜೆಪಿ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಆಹ್ವಾನ ಬಂದಿಲ್ಲ ಎಂದು ಸ್ಪಷ್ಪಪಡಿಸಿದರು.
ತತ್ವಜ್ಞಾನಿ ಹಾಗೂ ಖ್ಯಾತ ತಮಿಳು ಕವಿ ತಿರುವಳ್ಳುವರ್ ಬಿಳಿ ಶಾಲಿನ ಬದಲು ಕೇಸರಿ ಶಾಲು ಧರಿಸಿದ ಚಿತ್ರವನ್ನು ತಮಿಳುನಾಡು ಬಿಜೆಪಿ ಘಟಕ ಮಾಡಿದ ಟ್ವೀಟ್ ವಿವಾದಕ್ಕೀಡಾಗಿದೆ. ದ್ರಾವಿಡ ಸಂಘಟನೆಗಳ ಆಕ್ರೋಶಕ್ಕೆ ಟ್ವೀಟ್ ಗುರಿಯಾಗಿದ್ದು, ಬಿಜೆಪಿ ತಿರುವಳ್ಳುವರ್ ಅವರನ್ನೂ ಕೇಸರೀಕರಣಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.
Advertisement