ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಪ್ರಕ್ರಿಯೆ ಚುರುಕುಗೊಳ್ಳುತ್ತಿದ್ದು, ಶಿವಸೇನೆ ಸರ್ಕಾರ ರಚನೆಯ ಹಾದಿಯಲ್ಲಿದೆ.
ಶಿವಸೇನೆಗೆ ಬೆಂಬಲ ನೀಡುವ ಸಂಬಂಧ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಡೆಸಿದ್ದ ಸಭೆ ಅಂತ್ಯಗೊಂಡಿದೆ. ಬಿಜೆಪಿಯೇತರ ಸರ್ಕಾರ ರಚನೆ ಸಾಧ್ಯತೆಗಳು ನಿಚ್ಚಳವಾಗಿದ್ದು ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ಮಹಾರಾಷ್ಟ್ರ ಸರ್ಕಾರ ರಚನೆಗೆ ಬೆಂಬಲ ನೀಡುವ ಕುರಿತು ಅಧಿಕೃತ ಘೋಷಣೆ ಮಾಡಲಿದೆ.
ಈ ನಡುವೆ ಶಿವಸೇನೆ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಏಕನಾಥ್ ಶಿಂಧೆ ರಾಜ್ಯಪಾಲರ ಭೇಟಿಯ ನಿಯೋಗದಲ್ಲಿದ್ದಾರೆ.
ಶಿವಸೇನೆ ಎನ್ ಸಿಪಿಯ ಬೆಂಬಲ ನಿರೀಕ್ಷಿಸುವುದಿದ್ದರೆ ಅದು ಮೊದಲು ಎನ್ ಡಿಎ ಮೈತ್ರಿಕೂಟದಿಂದ ಹೊರಬರಬೇಕೆಂಬ ಷರತ್ತನ್ನು ಎನ್ ಸಿಪಿ ನಾಯಕರು ವಿಧಿಸಿದ್ದರು. ಎನ್ ಸಿಪಿಯ ಈ ಷರತ್ತನ್ನು ಒಪ್ಪಿದ್ದ ಶಿವಸೇನೆ ಕೇಂದ್ರ ಸಚಿವ ಸಂಪುಟದಲ್ಲಿದ್ದ ಅರವಿಂದ್ ಸಾವಂತ್ ರಾಜೀನಾಮೆ ನೀಡಿ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದಿದ್ದರು.
Advertisement