ಮುಂಬೈ: ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರವೂ ಮಹಾರಾಷ್ಟ್ರ ರಾಜ್ಯದಲ್ಲಿ ಪಕ್ಷಗಳ ರಾಜಕೀಯ ಮುಂದುವರಿದಿದೆ.
ನಿನ್ನೆ ದಿನವಿಡೀ ಕಾಂಗ್ರೆಸ್, ಎನ್ ಸಿಪಿ ಮತ್ತು ಶಿವಸೇನೆ ನಾಯಕರು ಬಿರುಸಿನ ರಾಜಕೀಯ ಚಟುವಟಿಕೆ ನಡೆಸಿದ್ದು ಬಿಜೆಪಿಯೇತರ ಸರ್ಕಾರ ರಚನೆ ಮಾಡುವ ಕುರಿತು ಮಾತುಕತೆ ನಡೆಸಿದ್ದಾರೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು(ಸಿಎಂಪಿ) ಅಂತಿಮಗೊಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ಜಾರಿಗೆ ಬರುವ ಸಾಧ್ಯತೆ ಖಂಡಿತಾ ಇದೆ. ಉನ್ನತ ಮಟ್ಟದ ನಾಯಕರು ಸಹಮತಕ್ಕೆ ಬಂದರೆ ಅಧಿಕಾರ ಹಂಚಿಕೆ ಸಂಬಂಧ ಮಾತುಕತೆ ನಡೆಸಲಾಗುವುದು ಎಂದು ಕಾಂಗ್ರೆಸ್ ಹಿರಿಯ ನಾಯಕ ವಿಜಯ್ ವಡೆಟ್ಟಿವಾರ್ ಪಕ್ಷಗಳ ಜಂಟಿ ಸಭೆ ಮುಗಿದ ನಂತರ ಸುದ್ದಿಗಾರರಿಗೆ ನಿನ್ನೆ ಮುಂಬೈಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಒಪ್ಪಿಗೆಯಾದ ನಂತರ ಇದೇ ಭಾನುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎನ್ ಸಿಪಿ ನಾಯಕ ಶರದ್ ಪವಾರ್ ದೆಹಲಿಯಲ್ಲಿ ಭೇಟಿಯಾಗುವ ಸಾಧ್ಯತೆಯಿದೆ.
ನಿನ್ನೆ ಮೂರೂ ಪಕ್ಷಗಳ ನಾಯಕರು ಎರಡು ಪ್ರತ್ಯೇಕ ಸಭೆಗಳನ್ನು ನಡೆಸಿ ಬಾಂದ್ರಾದಲ್ಲಿರುವ ಛಗನ್ ಬುಜ್ಬಲ್ ಕಚೇರಿಯಲ್ಲಿ ಸಾಯಂಕಾಲ ಭೇಟಿ ಮಾಡಿ ಕರಡು ಸಿಎಂಪಿಯ ಬಗ್ಗೆ ಚರ್ಚೆ ನಡೆಸಿ ಅಂತಿಮಗೊಳಿಸಿದ್ದಾರೆ.
ಶಿವಸೇನೆ ನಾಯಕ ಏಕಾಂತ ಶಿಂಧೆ ಮತ್ತು ಸುಧೀರ್ ದೇಸಾಯಿ, ಎನ್ ಸಿಪಿ ನಾಯಕರಾದ ಜಯಂತ್ ಪಾಟೀಲ್, ನವಾಬ್ ಮಲಿಕ್ ಮತ್ತು ಛಗನ್ ಬುಜಬಲ್ ಮತ್ತು ಕಾಂಗ್ರೆಸ್ ನಾಯಕರಾದ ಮಾಣಿಕ್ ರಾವ್ ಠಾಕ್ರೆ, ಪೃಥ್ವಿರಾಜ್ ಚೌವಾಣ್ ಮತ್ತು ವಿಜಯ್ ವಡೆಟ್ಟಿವಾರ್ ಜೊತೆ ಸೇರಿ ಗೌಪ್ಯ ಸಭೆ ನಡೆಸಿದ್ದು ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಅವಕಾಶವಿರಲಿಲ್ಲ.
Advertisement