ಬಾತ್ಲಾ(ಪಂಜಾಬ್): ನೆರೆಮನೆಯವರೊಂದಿಗೆ ವಾಗ್ವಾದಕ್ಕಿಳಿದಿದ್ದ ಸ್ಥಳೀಯ ಶಿರೋಮಣಿ ಅಕಾಲಿದಳ ಮುಖಂಡನೊಓರ್ವನ ಕಾಲುಗಳನ್ನು ಕತ್ತರಿಸಿದ್ದಲ್ಲದೆ ಆತನನ್ನು ಗುಂಡಿಕ್ಕಿ ಹತ್ಯೆ ಮಡಲಾಗಿದೆ ಎಂದು ಪಂಜಾಬ್ ಪೋಲೀಸರು ತಿಳಿಸಿದ್ದಾರೆ. ಪಂಜಾಬ್ನ ಗುರುದಾಸ್ಪುರ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಎಸ್ಎಡಿಯ ಗುರುದಾಸ್ಪುರ ಘಟಕದ ಉಪಾಧ್ಯಕ್ಷರಾಗಿದ್ದ ಮತ್ತು ಎರಡು ಬಾರಿ ಗ್ರಾಮದ ಮುಖ್ಯಸ್ಥರಾಗಿದ್ದ ದಲ್ಬೀರ್ ಸಿಂಗ್ ಧಿಲ್ವಾನ್ (51) ಹತ್ಯೆಗೀಡಾಗಿದ್ದಾರೆ.
ದಲ್ಬೀರ್ ಸಿಂಗ್ ಹತ್ಯೆಯ ಹಿಂದೆ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದು ಬಾತ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಓಪಿಂದರ್ಜಿತ್ ಸಿಂಗ್ ಘುಮನ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಸಂಜೆ ಡೇರಾ ಬಾಬಾ ನಾನಕ್ ಪ್ರದೇಶದ ಧಿಲ್ವಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಲ್ಬೀರ್ ಸಿಂಗ್ ಮತ್ತು ಅವರ ನೆರೆಮನೆಯ ಬಲ್ವಿಂದರ್ ಸಿಂಗ್ ನಡುವೆ ವಾಗ್ವಾದ ನಡೆದಿದೆ. ಮನೆಗೆಲಸದವರ ನೇಮಕಕ್ಕೆ ಸಂಬಂಧಿಸಿ ಈ ಹಿಂದೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂಬಂಧ ಸೋಮವಾರ ಗ್ರಾಮಸ್ಥರ ಸಹಾಯದಿಂದ ಇಬ್ಬರ ನಡುವೆ ರಾಜಿ ಸಂಧಾನ ಸಹ ನೆರವೇರಿದೆ.
ಆದರೆ ದಲ್ಬೀರ್ ಸಿಂಗ್ ಮತ್ತು ಅವರ ಮಗ ಅದೇ ದಿನ ಸಂಜೆ ಗ್ರಾಮದ ಹೊರವಲಯದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬಲ್ವಿಂದರ್ ಸಿಂಗ್ ಅವರ ಇಬ್ಬರು ಪುತ್ರರು- ಮೇಜರ್ ಸಿಂಗ್ (25) ಮತ್ತು ಮಂದೀಪ್ ಸಿಂಗ್ (24) ಅವರನ್ನು ದಾರಿತಪ್ಪಿಸಿದ್ದಾರೆ ಅವರಲ್ಲಿ ಒಬ್ಬರು ದಲ್ಬೀರ್ ಸಿಂಗ್ಗೆ ಆರು ಗುಂಡುಗಳನ್ನು ಹಾರಿಸಿದ್ದಾರೆ. ಬಳಿಕ ಗಾಯಾಳುವಾಗಿದ್ದ ದಲ್ಬೀರ್ ಕಾಲುಗಳನ್ನು ಕತ್ತರಿಸಿದ್ದಾರೆ.ಬಲ್ವಿಂದರ್ ಸಿಂಗ್ ಮಾರಕಾಸ್ತ್ರಗಳಿಂದ ದಲ್ಬೀರ್ ಕಾಲುಗಳನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ದಲ್ಬೀರ್ ಸಿಂಗ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಸಧ್ಯ ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ), ಶಸ್ತ್ರಾಸ್ತ್ರ ಕಾಯ್ದೆಯ ಇತರ ಸಂಬಂಧಿತ ವಿಭಾಗಗಳಡಿ ಮೂವರು ಆರೋಪಿಗಳು ಮತ್ತು ಆರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಆರೋಪಿಗಳು ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚಲು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement