ಹೈದರಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಲ್ಪುರ್ ಜಿಲ್ಲೆಯ ಕೊಲಿಸ್ತಾನ್ ಮರುಭೂಮಿಯ ಗಡಿ ಮೂಲಕ ಪಾಕಿಸ್ತಾನವನ್ನು ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಒಬ್ಬರು ತೆಲಂಗಾಣ ಮೂಲದ ವಿ ಬಾಬುರಾವ್ ಅವರ ಪುತ್ರ ಸಾಫ್ಟ್ ವೇರ್ ಎಂಜಿನಿಯರ್ ಪ್ರಶಾಂತ್ ವೈಂದಮ್ ಮತ್ತು ಮಧ್ಯ ಪ್ರದೇಶದ ಸುಬಿ ಲಾಲ್ ಪುತ್ರ ದುರ್ಮಿ ಲಾಲ್ ಎಂದು ಗುರುತಿಸಲಾಗಿದೆ.
ಪಾಕಿಸ್ತಾನ ಪೊಲೀಸರು ಇವರಿಬ್ಬರ ಮೇಲೆ ಎಫ್ಐಆರ್ ದಾಖಲಿಸಿದ್ದು ಪಾಕಿಸ್ತಾನ ಮಾಧ್ಯಮಗಳಿಗೆ ಎಫ್ಐಆರ್ ಪ್ರತಿ ಸಿಕ್ಕಿದೆ. ಕಳೆದ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಇವರು ಬಂಧಿತರಾಗಿದ್ದಾರೆ.
ಕೊಲಿಸ್ತಾನ್ ಗಡಿಯಲ್ಲಿ ಇಬ್ಬರು ವಿದೇಶಿಯರು ತಿರುಗಾಡುತ್ತಿದ್ದಾರೆ ಎಂದು ಮಾಹಿತಿ ಪಡೆದ ಪಾಕಿಸ್ತಾನ ಪೊಲೀಸರು ಅಲ್ಲಿಗೆ ಧಾವಿಸಿ ಅಲ್ಲಿ ಮರಳಿನ ದಿಬ್ಬದ ಹಿಂದೆ ಅವಿತು ಕುಳಿತಿದ್ದ ಈ ಭಾರತೀಯ ಯುವಕರನ್ನು ಬಂಧಿಸಿದ್ದಾರೆ.
ಪೊಲೀಸರು ಅವರ ಬಳಿ ಗುರುತು ಪತ್ರ ಮತ್ತು ಪಾಸ್ ಪೋರ್ಟ್ ಕೇಳಿದಾಗ ಅವರಲ್ಲಿ ಯಾವುದೂ ಇರಲಿಲ್ಲ ಎಂದು ತಿಳಿದುಬಂದಿದೆ.
ನಿನ್ನೆ ಬಿಡುಗಡೆಯಾದ ವಿಡಿಯೊದಲ್ಲಿ ಪ್ರಶಾಂತ್ ತನ್ನ ಪೋಷಕರನ್ನು ಉದ್ದೇಶಿಸಿ ತನ್ನನ್ನು ಜೈಲಿಗೆ ಕಳುಹಿಸಲಾಗಿದ್ದು ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಿಕೊಂಡಿದ್ದಾರೆ.
Advertisement