'ಇದು ದೊಡ್ಡ ಹಗರಣ, ಮೋದಿ ಸರ್ಕಾರ ದೇಶವನ್ನು ಲೂಟಿ ಮಾಡುತ್ತಿದೆ': ಲೋಕಸಭೆಯಲ್ಲಿ ಪ್ರತಿಪಕ್ಷಗಳಿಂದ ತೀವ್ರ ಪ್ರತಿಭಟನೆ 

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್) ಸೇರಿದಂತೆ ಕೆಲವು ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದನ್ನು ಮತ್ತು ಚುನಾವಣಾ ಬಾಂಡ್ ಗಳನ್ನು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಲೋಕಸಭೆಯಲ್ಲಿ ತೀವ್ರ ಕೋಲಾಹಲ ನಡೆಸಿದ ಘಟನೆ ನಡೆಯಿತು. ಸರ್ಕಾರದ ಈ ನಡೆ ದೊಡ್ಡ ಹಗರಣ ಎಂದು ಟೀಕಿಸಿದೆ.
ವಿರೋಧ ಪಕ್ಷಗಳಿಂದ ಪ್ರತಿಭಟನೆ
ವಿರೋಧ ಪಕ್ಷಗಳಿಂದ ಪ್ರತಿಭಟನೆ

ನವದೆಹಲಿ; ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್) ಸೇರಿದಂತೆ ಕೆಲವು ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದನ್ನು ಮತ್ತು ಚುನಾವಣಾ ಬಾಂಡ್ ಗಳನ್ನು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಲೋಕಸಭೆಯಲ್ಲಿ ತೀವ್ರ ಕೋಲಾಹಲ ನಡೆಸಿದ ಘಟನೆ ನಡೆಯಿತು. ಸರ್ಕಾರದ ಈ ನಡೆ ದೊಡ್ಡ ಹಗರಣ ಎಂದು ಟೀಕಿಸಿದೆ.


ಸದನದ ಬಾವಿಗಿಳಿದು ಸುಮಾರು 15 ನಿಮಿಷಗಳ ಕಾಲ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿ ಕೋಲಾಹಲವೆಬ್ಬಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡುತ್ತೇನೆಂದು ಸಭಾಧ್ಯಕ್ಷ ಓಂ ಬಿರ್ಲಾ ಅವರು ಭರವಸೆ ನೀಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯರು ತಮ್ಮ ಸ್ಥಾನಕ್ಕೆ ವಾಪಸ್ಸಾದರು.


ಇದೊಂದು ದೊಡ್ಡ ಹಗರಣ. ದೇಶವನ್ನು ಲೂಟಿ ಮಾಡಲಾಗುತ್ತಿದೆ. ನಮಗೆ ಸದನದಲ್ಲಿ ಮಾತನಾಡಲು ಅವಕಾಶ ಕೊಡಿ ಎಂದು ಕಾಂಗ್ರೆಸ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದರು.


ಆಗ ಸಭಾಧ್ಯಕ್ಷರು, ಸದಸ್ಯರು ಸದನದ ಬಾವಿಗಿಳಿದು ಸದನದ ಘನತೆಗೆ ಕುಂದು ತರಬಾರದು. ಇದು ತಪ್ಪು. ಕ್ರೀಡಾಪಟುಗಳ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಅಂತಹ ಸಮಯದಲ್ಲಿ ಬಾವಿಗಿಳಿದು ಮಾತನಾಡಬೇಡಿ. ಸದನದ ಗೌರವ, ಘನತೆ ಕಾಪಾಡುವುದು ಪ್ರತಿ ಸದಸ್ಯರ ಜವಾಬ್ದಾರಿಯಾಗಿದೆ ಎಂದರು.


ಪ್ರಶ್ನೋತ್ತರ ಅವಧಿ ಮುಖ್ಯವಾಗಿದ್ದು ಸಂಸದರು ಕಲಾಪಗಳಿಗೆ ಅಡ್ಡಿಪಡಿಸಬಾರದು ಎಂದರು.


ನಾನು ಹೊಸಬ. ನೀವು ಹಿರಿಯರು. ಬಾವಿಯ ಬಳಿ ಬರಬೇಡಿ. ಸಂಪ್ರದಾಯಗಳನ್ನು ಕಾಪಾಡಿ ಎಂದ ಸ್ಪೀಕರ್ ಕಾಂಗ್ರೆಸ್ ಹೊರಡಿಸಿರುವ ನಿಲುವಳಿ ಸೂಚನೆಯನ್ನು ಒಪ್ಪುವುದಿಲ್ಲ. ಆದರೆ ಶೂನ್ಯ ವೇಳೆಯಲ್ಲಿ ಮಾತನಾಡಲು ಅವಕಾಶ ನೀಡುತ್ತೇನೆ ಎಂದರು.ಸ್ಪೀಕರ್ ಅವರಿಂದ ಭರವಸೆ ಸಿಕ್ಕಿದ ಮೇಲೆ ಕಾಂಗ್ರೆಸ್ ಸದಸ್ಯರು ತಮ್ಮ ಸ್ಥಾನದಲ್ಲಿ ಹೋಗಿ ಕುಳಿತರು.


ಪ್ರತಿಪಕ್ಷದ ಸದಸ್ಯರು ಸದನದ ಕಲಾಪ ಸುಗಮವಾಗಿ ನಡೆಯಲು ಸಹಕರಿಸುತ್ತೇವೆ. ಇದಕ್ಕೆ ಸಭಾಧ್ಯಕ್ಷರು ಕೂಡ ಅದೇ ರೀತಿಯ ಸಹಕಾರ ನೀಡಬೇಕೆಂದರು. ನೀವು ಸದನಕ್ಕೆ ಹೊಸಬರಲ್ಲ. ನೀವು ಸದನಕ್ಕೆ ಅಧ್ಯಕ್ಷರು. ಕಲಾಪದಲ್ಲಿ ಪ್ರಮುಖ ವಿಷಯಗಳು ಚರ್ಚೆಗೆ ಬರಬೇಕೆಂದು ನಾವು ಒತ್ತಾಯಪೂರ್ವಕವಾಗಿ ನಿಲುವಳಿ ಸೂಚನೆ ನೀಡುತ್ತಿದ್ದೇವೆ ಹೊರತು ಸಭಾಧ್ಯಕ್ಷ ಪೀಠಕ್ಕೆ ಅಗೌರವ ತೋರಿಸಲು ಅಲ್ಲ. ಇದೊಂದು ದೊಡ್ಡ ಹಗರಣ ಹೀಗಾಗಿ ನಾವು ನಿಲುವಳಿ ಸೂಚನೆ ನೀಡಿದ್ದೇವೆ. ದೇಶವನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಎಂದರು.


ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಪ್ರಧಾನಿ ಮೋದಿಯವರು ಸ್ವಚ್ಛ ಸರ್ಕಾರ ನಡೆಸುತ್ತಿದ್ದು ಭ್ರಷ್ಟಾಚಾರ ನಡೆಯುವ ಸಾಧ್ಯತೆಯಿಲ್ಲ, ನೀವು ಪ್ರತಿದಿನ ಒಂದಿಲ್ಲೊಂದು ನಿಲುವಳಿ ಸೂಚನೆ ಹಿಡಿದುಕೊಂಡು ಬರುತ್ತೀರಿ. ಹೀಗೆ ಮಾಡಬಾರದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com