ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಕಣಿವೆ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಲು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ನೇತೃತ್ವದ ನಾಗರಿಕ ಸಮಾಜದ ನಿಯೋಗಕ್ಕೆ ಅನುಮತಿ ನೀಡಲಾಗಿದೆ.
ಸಿನ್ಹಾ ನೇತೃತ್ವದ ನಿಯೋಗ ಶುಕ್ರವಾರ ಕಾಶ್ಮೀರಕ್ಕೆ ಆಗಮಿಸಿದ್ದು, ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ, ಮಾಜಿ ಏರ್ ವೈಸ್ ಮಾರ್ಷಲ್ ಕಪಿಲ್ ಕಾಕ್, ಪತ್ರಕರ್ತ ಭರತ್ ಭೂಷಣ್ ಮತ್ತು ಸುಶೋಬಾ ಭರ್ವೆ ಅವರು ನಿಯೋಗದಲ್ಲಿದ್ದಾರೆ.
ಈ ಹಿಂದೆಯೂ ಈ ನಿಯೋಗ ಕಾಶ್ಮೀರ ಭೇಟಿಗೆ ಯತ್ನಿಸಿತ್ತು. ಆದರೆ ಕಾಶ್ಮೀರ ಸರ್ಕಾರ ಅನಮತಿ ನಿರಾಕರಿಸಿತ್ತು. ಹೀಗಾಗಿ ಅವರು ವಿಮಾನ ನಿಲ್ದಾಣದಿಂದ ದೆಹಲಿಗೆ ವಾಪಸ್ ಆಗಿದ್ದರು.
370ನೇ ವಿಧಿ ರದ್ದುಗೊಳಿಸಿದ ನಂತರ ಕಾಶ್ಮೀರದ ಪರಿಸ್ಥಿತಿ ಬಗ್ಗೆ ಸರ್ಕಾರ, ಮಾಧ್ಯಮಗಳಿಂದ ವಿಭಿನ್ನ ವರದಿಗಳು ಬಂದಿವೆ. ಹೀಗಾಗಿ ಇಲ್ಲಿನ ಪರಿಸ್ಥಿತಿ ಬಗ್ಗೆ ನಾವು ಸ್ವತಃ ಪರಿಶೀಲಿಸಬೇಕಿದೆ. ಈ ಬಾರಿ ಅನುಮತಿ ನೀಡಿದ್ದಕ್ಕಾಗಿ ನಾನು ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದು ಯಶವಂತ್ ಸಿನ್ಹಾ ಹೇಳಿದ್ದಾರೆ.
ನಾವು ಇಲ್ಲಿ ವಿವಿಧ ವರ್ಗದ ಜನರನ್ನು ಭೇಟಿ ಮಾಡಿ, ಕಳೆದ ಮೂರು ತಿಂಗಳಲ್ಲಿ ಅವರು ಅನುಭವಿಸಿದ ಆರ್ಥಿಕ ನಷ್ಟ ಹಾಗೂ ಎದುರಿಸಿದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದು ಮಾಜಿ ಹಣಕಾಸು ಸಚಿವರ ಹೇಳಿದ್ದಾರೆ.
Advertisement