ಮುಂಬೈ: ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಶಾಸಕರು ಸೋಮವಾರ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳ ಮುಂದೆ ಪರೇಡ್ ನಡೆಸಿದ ಬಳಿಕ ಭಾರತ ಸಂವಿಧಾನ ರಕ್ಷಿಸಲು ಮತ್ತು ಮೈತ್ರಿಗೆ ನಿಷ್ಠರಾಗಿರಲು ತಾವು ಬದ್ಧ ಎಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಈ ಮೂರು ಪಕ್ಷಗಳು ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚಿಸಬೇಕು ಎನ್ನುವಷ್ಟರಲ್ಲಿ ಬಿಜೆಪಿಯೂ ಅಜಿತ್ ಪವಾರ್ ಸಹಕಾರದೊಂದಿಗೆ ಸರ್ಕಾರ ರಚಿಸಿದೆ. ಆದರೆ ಬಿಜೆಪಿ ಬಹುಮತ ಇಲ್ಲದೆ, ಸರ್ಕಾರ ರಚಿಸಿದೆ. ನಮ್ಮ ಬಳಿ ಸರ್ಕಾರ ರಚನೆಗೆ ಬೇಕಾದ ಸಂಖ್ಯಾ ಬಲವಿದೆ ಎಂದು ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಇಂದು 162 ಶಾಸಕರೊಂದಿಗೆ ಶಕ್ತಿ ಪ್ರದರ್ಶನ ಮಾಡಿವೆ.
ಮೂರು ಪಕ್ಷಗಳು ಇಂದು ಸಂಜೆ ತಮ್ಮ ಶಾಸಕರನ್ನು ಗ್ರ್ಯಾಂಡ್ ಹಯಾಟ್ ಹೋಟೆಲ್ನಲ್ಲಿ ಸೇರಿಸಿ, ಮಾಧ್ಯಮಗಳ ಮುಂದೆ ಒಗ್ಗಟ್ಟು ಪ್ರದರ್ಶಿಸಿವೆ. ಅಲ್ಲದೆ ನಾವು 162 ಶಾಸಕರು ಒಗ್ಗಟ್ಟಾಗಿದ್ದೇವೆ. ಸರ್ಕಾರ ರಚನೆಗೆ ಬೇಕಾದ ಬಹುಮತ ನಮ್ಮ ಬಳಿ ಇದೆ ಎಂದು ಘೋಷಿಸಿದರು. ಮಹಾವಿಕಾಸ್ ಅಗ್ಹಾಡಿ ದೀರ್ಘ ಕಾಲ ಉಳಿಯಲಿ ಎಂದು ಘೋಷಣೆ ಮೊಳಗಿಸಿದರು.
ಬಳಿಕ ನಾನು, ಶರದ್ ಪವಾರ್, ಉದ್ಧವ್ ಠಾಕ್ರೆ, ಸೋನಿಯಾ ಗಾಂಧಿ ನಾಯಕತ್ವದಲ್ಲಿ ಪ್ರಮಾಣ ಮಾಡುತ್ತೇನೆ, ನಾನು ನನ್ನ ಪಕ್ಷಕ್ಕೆ ಪ್ರಾಮಾಣಿಕವಾಗಿ ಇರುತ್ತೇನೆ. ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ. ಬಿಜೆಪಿಗೆ ಅನುಕೂಲವಾಗುವ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ಪ್ರಮಾಣವಚನ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ, ನಮ್ಮ ಬಹುಮತ ಸಾಬೀತು ಮಾಡಲು ಯಾವುದೇ ಸಮಸ್ಯೆಯಿಲ್ಲ. ಪಕ್ಷದಿಂದ ಅಮಾನತುಗೊಂಡವರು ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ. ಬಹುಮತ ಸಾಬೀತು ಮಾಡುವ ದಿನ ನಾನು 162ಕ್ಕೂ ಹೆಚ್ಚು ಶಾಸಕರನ್ನು ಕರೆತರುತ್ತೇನೆ. ಇದು ಗೋವಾ ಅಲ್ಲ, ಮಹಾರಾಷ್ಟ್ರ. ಪಾಠ ಹೇಗೆ ಮಾಡಬೇಕು ಎಂಬುದನ್ನು ನಮಗೆ ಹೇಳಿಕೊಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ, ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ನಮ್ಮ ಹಾದಿ ಸುಗಮವಾಗಿದೆ. ಶಿವಸೇನೆ ಏನು ಎಂಬುದು ಗೊತ್ತಿಲ್ಲದೇ ಅಡ್ಡಹಾದಿಯಲ್ಲಿ ನುಗ್ಗಲು ಯತ್ನಿಸಿದರೆ ನಾವು ಯಾರು ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
Advertisement