ನಾಗರಿಕರ ಜವಾಬ್ದಾರಿಗಳಿಗೆ ಒತ್ತು ಕೊಡುವ ಸಮಯವಿದು:  ಪ್ರಧಾನಿ ಮೋದಿ 

ಸಂವಿಧಾನ ಅಳವಡಿಸಿಕೊಂಡು 70 ವರ್ಷವಾದ ಹಿನ್ನಲೆಯಲ್ಲಿ ಮಂಗಳವಾರ 70ನೇ ಸಂವಿಧಾನ ದಿನವನ್ನು ಆಚರಿಸುತ್ತಿದೆ.
ಸಂಸತ್ತಿನ ಜಂಟಿ ಅಧಿವೇಶನಕ್ಕೆ ಬಂದ ಕ್ಷಣ
ಸಂಸತ್ತಿನ ಜಂಟಿ ಅಧಿವೇಶನಕ್ಕೆ ಬಂದ ಕ್ಷಣ

ನವದೆಹಲಿ:ಸಂವಿಧಾನ ಅಳವಡಿಸಿಕೊಂಡು 70 ವರ್ಷವಾದ ಹಿನ್ನಲೆಯಲ್ಲಿ ಮಂಗಳವಾರ 70ನೇ ಸಂವಿಧಾನ ದಿನವನ್ನು ಆಚರಿಸುತ್ತಿದೆ.


ಈ ಸಂದರ್ಭದಲ್ಲಿ ನಾಗರಿಕರ ಜವಾಬ್ದಾರಿಗಳಿಗೆ ಒತ್ತುಕೊಡುವ ಸಮಯ ಬಂದಿದೆ. ಸಂವಿಧಾನ ದೇಶದ ನಾಗರಿಕರ ಹಕ್ಕು ಮತ್ತು ಕರ್ತವ್ಯಗಳೆರಡನ್ನೂ ಸಾರುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 


ಅವರು ಇಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸಂವಿಧಾನದದಲ್ಲಿ ಅಳವಡಿಸಿಕೊಂಡಿರುವ ಕರ್ತವ್ಯಗಳನ್ನು ಹೇಗೆ ಈಡೇರಿಸಬೇಕು ಎಂಬುದನ್ನು ನಾವು ಯೋಚಿಸುವ ಸಮಯ ಬಂದಿದೆ. ದೇಶದಲ್ಲಿ ಬಹುತೇಕ ಜನರು ನ್ಯಾಯ ಮತ್ತು ಸಮಾನತೆಯಿಂದ ವಂಚಿತರಾಗಿರುವುದರಿಂದ ಜನರ ಹಕ್ಕುಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮಾತುಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಸಮಾಜದಲ್ಲಿ ವ್ಯಕ್ತಿಗಳು ತಮ್ಮ ಜವಾಬ್ದಾರಿಗಳನ್ನು ಪೂರೈಸದೆ ಹಕ್ಕುಗಳನ್ನು ಕೇಳುವ ನೈತಿಕ ಹಕ್ಕು ಹೊಂದಿರುವುದಿಲ್ಲ ಎಂದು ಮನದಟ್ಟು ಮಾಡಿಕೊಳ್ಳಬೇಕು ಎಂದರು.


ನಾವು ಭಾರತೀಯರು ಎಂಬಲ್ಲಿಂದ ಸಂವಿಧಾನ ಆರಂಭವಾಗುತ್ತದೆ.ಜನರೇ ಸಂವಿಧಾನದ ಶಕ್ತಿ, ಪ್ರೇರಣೆ ಮತ್ತು ಗುರಿಯಾಗಿದೆ. ನಮ್ಮ ಕರ್ತವ್ಯಗಳ ಮೇಲೆ ಪ್ರಯತ್ನ ಮುಂದುವರಿಯಬೇಕು. ನಾಗರಿಕರ ಹಕ್ಕು ಮತ್ತು ಕರ್ತವ್ಯಗಳ ನಡುವಿನ ಸಮತೋಲನವನ್ನು ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿಯವರು ಚೆನ್ನಾಗಿ ಅರಿತುಕೊಂಡಿದ್ದರು. ಹೆಮ್ಮೆಯ ಭಾರತೀಯರಾಗಿ ನಾವು, ನಮ್ಮ ಕೆಲಸಗಳ ಮೂಲಕ ದೇಶವನ್ನು ಇನ್ನಷ್ಟು ಬಲಪಡಿಸುವುದು ಹೇಗೆ ಎಂದು ಯೋಚಿಸೋಣ ಎಂದು ಪ್ರಧಾನಿ ಹೇಳಿದರು.

ಸಂವಿಧಾನ ದಿನದ ಆಚರಣೆ ಸಂದರ್ಭದಲ್ಲಿ ಸಂವಿಧಾನ ಕರ್ತೃ ಬಿ ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿ ಕಳೆದ 70 ವರ್ಷಗಳಲ್ಲಿ ದೇಶದ ಪ್ರಜಾಪ್ರಭುತ್ವ ಸಶಕ್ತೀಕರಣಗೊಂಡು ಬಲವಾಗಿದೆ ಎಂದರು.

2008ರಲ್ಲಿ ವಾಣಿಜ್ಯ ನಗರಿ ಮುಂಬೈಯ ಅವಳಿ ಕಟ್ಟಡಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗೆ ಸಹ ಪ್ರಧಾನ ಮಂತ್ರಿ ಗೌರವ ನಮನ ಸಲ್ಲಿಸಿದರು.


ದೇಶದಲ್ಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿದವರು, ನಾಗರಿಕ ಸಮಾಜದ ಸದಸ್ಯರು ಮತ್ತು ನಾಗರಿಕರು ಸಂವಿಧಾನದ ನೈತಿಕತೆಯನ್ನು ಪಾಲಿಸಬೇಕು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com