ಗೋಡ್ಸೆ ದೇಶಭಕ್ತ ಹೇಳಿಕೆಗೆ ಬೆಲೆತೆತ್ತ ಸಂಸದೆ ಸಾಧ್ವಿ ಪ್ರಾಗ್ಯ ಠಾಕೂರ್: ರಕ್ಷಣಾ ಸಲಹಾ ಸಮಿತಿಯಿಂದ ಗೇಟ್ ಪಾಸ್!

ಲೋಕಸಭಾ ಸದಸ್ಯೆ ಸಾಧ್ವಿ ಪ್ರಾಗ್ಯ ಠಾಕೂರ್ ಅವರಿಗೆ ಸರಿಯಾದ ಛಾಟಿಯೇಟು ಬೀಸಿರುವ ಭಾರತೀಯ ಜನತಾ ಪಾರ್ಟಿ ಅವರನ್ನು ಸಂಸತ್ ಅಧಿವೇಶನದ ವೇಳೆ ಸಂಸದೀಯ ಪಕ್ಷ ಸಭೆಯಲ್ಲಿ ಭಾಗವಹಿಸುವುದಕ್ಕೆ ತಡೆನೀಡಿದೆ. ಅಲ್ಲದೆ ರಕ್ಷಣಾ ಇಲಾಖೆಯ ಸಲಹಾ ಸಮಿತಿಯಿಂದ ಕೈಬಿಟ್ಟಿದೆ.
ಸಾಧ್ವಿ ಪ್ರಾಗ್ಯ ಠಾಕೂರ್
ಸಾಧ್ವಿ ಪ್ರಾಗ್ಯ ಠಾಕೂರ್

ನವದೆಹಲಿ: ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯವರನ್ನು ಶ್ಲಾಘಿಸಿದ ಲೋಕಸಭಾ ಸದಸ್ಯೆ ಸಾಧ್ವಿ ಪ್ರಾಗ್ಯ ಸಿಂಗ್ ಠಾಕೂರ್ ಅವರಿಗೆ ಸರಿಯಾದ ಛಾಟಿಯೇಟು ಬೀಸಿರುವ ಭಾರತೀಯ ಜನತಾ ಪಾರ್ಟಿ ಅವರನ್ನು ಸಂಸತ್ ಅಧಿವೇಶನದ ವೇಳೆ ಸಂಸದೀಯ ಪಕ್ಷ ಸಭೆಯಲ್ಲಿ ಭಾಗವಹಿಸುವುದಕ್ಕೆ ತಡೆನೀಡಿದೆ. ಅಲ್ಲದೆ ರಕ್ಷಣಾ ಇಲಾಖೆಯ ಸಲಹಾ ಸಮಿತಿಯಿಂದ ಕೈಬಿಟ್ಟಿದೆ.


ಸಾಧ್ವಿ ಪ್ರಾಗ್ಯ ಠಾಕೂರ್ ವಿರುದ್ಧ ತೆಗೆದುಕೊಂಡಿರುವ ಶಿಸ್ತು ಕ್ರಮದ ಬಗ್ಗೆ ಪ್ರಕಟಿಸಿದ ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ, ಲೋಕಸಭೆಯಲ್ಲಿ ನಿನ್ನೆ ಪ್ರಾಗ್ಯ ಠಾಕೂರ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.


ಅಲ್ಲದೆ ಇತ್ತೀಚೆಗಷ್ಟೆ ರಕ್ಷಣಾ ಇಲಾಖೆಯ ಸಲಹಾ ಸಮಿತಿಗೆ ನೇಮಕಗೊಂಡಿದ್ದ ಸಾಧ್ವಿ ಪ್ರಾಗ್ಯ ಸಿಂಗ್ ಠಾಕೂರ್ ಅವರನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.


ಮಧ್ಯಪ್ರದೇಶ ಸಂಸದೆ ಸಾಧ್ವಿ ಪ್ರಾಗ್ಯ ಅವರು ನೀಡಿರುವ ಹೇಳಿಕೆ ಖಂಡನೀಯ. ಬಿಜೆಪಿ ಯಾವತ್ತಿಗೂ ಅಂತಹ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ ಮತ್ತು ಅಂತಹ ತತ್ವಗಳನ್ನು ಕೂಡ ಬೆಂಬಲಿಸುವುದಿಲ್ಲ. ಚಳಿಗಾಲ ಅಧಿವೇಶನದ ವೇಳೆ ಬಿಜೆಪಿ ಸಂಸದೀಯ ಪಕ್ಷದ ಸಭೆಗಳಲ್ಲಿ ಅವರು ಭಾಗವಹಿಸುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

ನಿನ್ನೆ ಲೋಕಸಭೆ ಅಧಿವೇಶನದ ವೇಳೆ ನಾಥುರಾಮ್‌ ಗೋಡ್ಸೆಯನ್ನು ಪ್ರಗ್ಯಾ ಸಿಂಗ್‌ ಠಾಕೂರ್‌ ದೇಶಭಕ್ತ ಎಂದು ಕರೆದಿದ್ದರು. ಆರಂಭದಲ್ಲಿ ಅವರು ಹಾಗೆ ಹೇಳೇ ಇಲ್ಲ ಎಂದು ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿ ತೇಪೆ ಹಚ್ಚಿದ್ದರು. ಆದರೆ ವಿಪಕ್ಷಗಳ ಪ್ರತಿಭಟನೆ ಹೆಚ್ಚಾದಂತೆ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಬಾರಿ ಕೋಲಾಹಲ ಎಬ್ಬಿಸುತ್ತಿದ್ದಂತೆ ಎಚ್ಚೆತ್ತ ಬಿಜೆಪಿ ನಾಯಕರು ಇಂದು ಶಿಸ್ತುಕ್ರಮ ಕೈಗೊಂಡಿದ್ದಾರೆ.

ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದವು. ಪ್ರಗ್ಯಾ ಠಾಕೂರ್‌ ವಿರುದ್ಧ ಪ್ರಧಾನಿ ಕ್ರಮ ಕೈಗೊಳ್ಳದೇ ಇರುವುದು, ಅವರು ಗೋಡ್ಸೆ ಆಲೋಚನೆಯನ್ನು ಬೆಂಬಲಿಸುತ್ತಾರೆ ಎಂಬುದನ್ನು ಸೂಚಿಸುತ್ತದೆ ಎಂದು ಹರಿಹಾಯ್ದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com