ನವದೆಹಲಿ: ಮಾರ್ಚ್ 20, 2018ರಲ್ಲಿ ಎಸ್.ಸಿ/ಎಸ್.ಟಿ ಕಾಯ್ದೆ ಅನ್ವಯ ವ್ಯಕ್ತಿಯೊಬ್ಬರನ್ನು ತಕ್ಷಣ ಬಂಧನ ಮಾಡದಂತೆ ಸುಪ್ರೀಂ ಕೋರ್ಟ್ ತಾನು ನೀಡಿದ್ದ ಆದೇಶವನ್ನು ಮಂಗಳವಾರ ಮತ್ತೆ ಉಲ್ಲೇಖಿಸಿದೆ.
ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಎಂಆರ್ ಶಾಹ್ ಮತ್ತು ಬಿಆರ್ ಗವಿ ಅವರನ್ನೊಳಗೊಂಡ ನ್ಯಾಯಪೀಠ, ದೇಶದಲ್ಲಿ ಎಸ್ ಸಿ/ಎಸ್ ಟಿ ಜನ ಈಗಲೂ ಸಮಾನತೆಗಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿದೆ.
ಎಸ್ ಸಿ/ಎಸ್ ಟಿ ಜನರನ್ನು ಈಗಲೂ ಅಸ್ಪುಶ್ಯರಂತೆ ಕಾಣಲಾಗುತ್ತಿದೆ ಮತ್ತು ನಿಂದನೆ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತಿದ್ದಾರೆ ಎಂದು ಕೋರ್ಟ್ ಹೇಳಿದೆ.
ಸಂವಿಧಾನದ 15ನೇ ವಿಧಿಯಲ್ಲಿ ಎಸ್ ಸಿ/ಎಸ್ ಟಿ ಜನರಿಗೆ ರಕ್ಷಣೆ ನೀಡಲಾಗಿದೆ. ಆದರೆ ಈಗಲೂ ಅವರನ್ನು ನಿಂದಿಸಲಾಗುತ್ತಿದೆ ಮತ್ತು ತಾರತಮ್ಯ ಮಾಡುತ್ತಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಎಸ್ ಸಿ/ಎಸ್ ಟಿ ಕಾಯ್ದೆನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ಇದು ಜಾತಿಯ ಸಮಸ್ಯೆ ಅಲ್ಲ. ಇದು ಮಾನವೀಯ ವೈಫಲ್ಯ ಎಂದಿದೆ.
ಕಳೆದ ವರ್ಷ ಮಾರ್ಚ್ 20ರಂದು ಎಸ್ಸಿ/ಎಸ್ಟಿ ಕಾಯ್ದೆಯ ಅಡಿಯಲ್ಲಿ ಆರೋಪಿಯನ್ನು ತಕ್ಷಣ ಬಂಧಿಸದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಬಳಿಕ ಈ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಕೇಂದ್ರ ಸುಪ್ರೀಂಗೆ ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮಾರ್ಚ್ 20ರಂದು ದ್ವಿಸದಸ್ಯ ಪೀಠ ನೀಡಿದ್ದ ತೀರ್ಪುನ್ನು ಟೀಕಿಸಿತ್ತು.
ಇದೇ ವೇಳೆ “ಭಾರತದಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾಗಿವೆ. ಆದರೂ, ದೇಶದಲ್ಲಿ ಇನ್ನೂ ಜಾತಿ ತಾರತಮ್ಯ ಮುಂದುವರೆಯುತ್ತಲೇ ಇದೆ ಎಂದು ಸುಪ್ರೀಂ ಕೋರ್ಟ್ ವಿಷಾಧ ವ್ಯಕ್ತಪಡಿಸಿತು. ಅಲ್ಲದೆ, ಮ್ಯಾನ್ಹೋಲ್ನಲ್ಲಿ ಪ್ರಾಣ ಬಿಡುತ್ತಿರುವ ಪೌರ ಕಾರ್ಮಿಕರ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿತ್ತು. ಯಾವ ದೇಶವೂ ತನ್ನ ಪ್ರಜೆಗಳನ್ನು ಸಾಯಲಿ ಎಂದು ಗ್ಯಾಸ್ ಚೇಂಬರ್ಗೆ ತಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
Advertisement