ಮಹಾತ್ಮಾ ಗಾಂಧಿಯವರ ಮಾನವೀಯತೆ, ಸರಳತೆ ನಮಗೆ ಸ್ಪೂರ್ತಿ: ರಾಷ್ಟ್ರಪತಿ, ಪ್ರಧಾನಿ  

ದೇಶಾದ್ಯಂತ ಬುಧವಾರ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನವನ್ನು ಶ್ರದ್ಧಾ ಭಕ್ತಿ ಮತ್ತು ಹಲವು ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ. 
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ಬಾಪೂಗೆ ನಮನ
ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ಬಾಪೂಗೆ ನಮನ

ನವದೆಹಲಿ: ದೇಶಾದ್ಯಂತ ಬುಧವಾರ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನವನ್ನು ಶ್ರದ್ಧಾ ಭಕ್ತಿ ಮತ್ತು ಹಲವು ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.


ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗಾಂಧೀಜಿಯವರನ್ನು ಸ್ಮರಿಸಿ, ಗಾಂಧೀಜಿಯವರ 150ನೇ ಜಯಂತಿಯ ಈ ಸಮಯ ನಮಗೆ ಸತ್ಯ, ಅಹಿಂಸೆ, ಸಹಕಾರ, ನೈತಿಕ ಮತ್ತು ಸರಳತೆಯ ಮೌಲ್ಯಗಳನ್ನು ನೆನಪಿಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಸಂದರ್ಭವಾಗಿದೆ. ಅವರ ಸಂದೇಶಗಳು ನಮಗೆ ಪ್ರಸ್ತುತವಾಗಿದ್ದು ಅವರ ಮಾರ್ಗದರ್ಶನಗಳು ಎಂದೆಂದಿಗೂ ದಾರಿದೀಪ ಎಂದಿದ್ದಾರೆ.


ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಹಾತ್ಮಾ ಗಾಂಧಿಯವರ ದೃಷ್ಟಿಕೋನಗಳಿಂದ ಭಾರತ ನಿರಂತರವಾಗಿ ಸ್ಪೂರ್ತಿ ಪಡೆಯುತ್ತಿರುತ್ತದೆ. ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಕೈಗೊಂಡಿರುವುದು ಅತ್ಯಂತ ಯಶಸ್ವಿಯಾಗುತ್ತಿರುವುದು ಗಾಂಧೀಜಿಯವರೇ ಇದಕ್ಕೆ ಪ್ರೇರಣೆ. ಗಾಂಧೀಜಿಯವರ ಸ್ವಾತಂತ್ರ್ಯತೆ, ವ್ಯಕ್ತಿತ್ವ, ಸಮಾನತೆಯಿಂದ ಕಾಣುವ ದೃಷ್ಟಿ ಯಾವುದೇ ಸ್ಥಳ ಮತ್ತು ಸಮಯಕ್ಕೆ ಸೀಮಿತವಾಗಿರದೆ ಸಮಯಾತೀತವಾಗಿ ಇಡೀ ವಿಶ್ವಕ್ಕೆ ಅನ್ವಯವಾಗುತ್ತದೆ ಎಂದರು. 


ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪ್ರೀತಿಯ ಬಾಪುಗೆ ನಮನಗಳು. ಮಾನವೀಯತೆಗೆ ಗಾಂಧೀಜಿಯವರು ನೀಡಿದ ಅಮೂಲ್ಯ ಕೊಡುಗೆಗಳಿಗೆ ನಮ್ಮ ಕೃತಜ್ಞತೆಗಳು. ಅವರ ಕನಸನ್ನು ಸಾಕಾರಗೊಳಿಸಲು ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ನಾವು ಪಣತೊಟ್ಟು ಅದರ ಕಡೆಗೆ ಕೆಲಸ ಮಾಡೋಣ ಎಂದಿದ್ದಾರೆ.


ನಂತರ ಇಂದು ಬೆಳಗ್ಗೆ ದೆಹಲಿಯ ರಾಜಘಾಟ್ ನಲ್ಲಿರುವ ಮಹಾತ್ಮಾ ಗಾಂಧಿ ಸಮಾದಿಗೆ ತೆರಳಿದ ಮೋದಿ ಬಾಪೂಜಿಗೆ ಪುಷ್ಪನಮನ ಸಲ್ಲಿಸಿದರು.  ಈ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಭಾರತೀಯ ಜನತಾ ಪಾರ್ಟಿಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಉಪಸ್ಥಿತರಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಸಹ ಗಾಂಧೀಜಿ ಸಮಾಧಿಗೆ ಪುಷ್ಪ ಗೌರವ ಸಲ್ಲಿಸಿದರು. 


ಇಂದು ದೇಶಾದ್ಯಂತ ಮಹಾತ್ಮಾ ಗಾಂಧಿಯವರ 150ನೇ ಜಯಂತಿ ಅಂಗವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 


ಗಾಂಧೀಜಿಯವರ 150ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷ 3 ತಿಂಗಳ ಕಾಲ ಗಾಂಧಿ ಸಂಕಲ್ಪ ಯಾತ್ರೆಯನ್ನು ಆಯೋಜಿಸಿದೆ. ಈ ಸಂಬಂಧ ಬಿಜೆಪಿ ನಾಯಕರಿಗೆ ಸುತ್ತೋಲೆ ಹೊರಡಿಸಲಾಗಿದ್ದು ಮುಂದಿನ ವರ್ಷ ಜನವರಿ 31ಕ್ಕೆ ಮುಕ್ತಾಯವಾಗಲಿದೆ. ಈ ಸಂಕಲ್ಪ ಯಾತ್ರೆಯಡಿ ಬಿಜೆಪಿ, ಗಾಂಧೀಜಿಯವರ ತತ್ವ, ಆದರ್ಶಗಳು, ಅಹಿಂಸೆ, ಸ್ವರಾಜ, ಸರಳತೆಯನ್ನು ಪ್ರಚುರಪಡಿಸಲಿದೆ. ಯಾತ್ರೆ ಸಂದರ್ಭದಲ್ಲಿ ಪೋಸ್ಟರ್, ಬ್ಯಾನರ್ ಗಳು ಮತ್ತು ಕಿಟ್ ಗಳನ್ನು ಬಿಜೆಪಿಯ ರಾಜ್ಯಕೇಂದ್ರಗಳಲ್ಲಿ ಬಿತ್ತರಿಸಲಾಗುತ್ತದೆ. 


ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಈ ಸಂಕಲ್ಪ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಆಯಾ ರಾಜ್ಯಗಳಲ್ಲಿ ಬಿಜೆಪಿ ಸಂಸದರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com