ಗೋಪಾಪುರ: ವಾಮಾಚಾರ ಅಭ್ಯಾಸ ಮಾಡುತ್ತಿದ್ದಾರೆಂದು ಅನುಮಾನಿಸಿದ ಗ್ರಾಮಸ್ಥರು ಆರು ಮಂದಿಯ ಹಲ್ಲನ್ನು ಕಿತ್ತು ಬಲವಂತವಾಗಿ ಮಲಮೂತ್ರ ತಿನ್ನಿಸಿರುವ ಅಮಾನವೀಯ ಘಟನೆ ಒಡಿಶಾ ರಾಜ್ಯದ ಕಾಳಿಕೋಟೆಯ ಗೋಪಾಪುರ ಗ್ರಾಮದಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ಗ್ರಾಮದ 29 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬ್ರಹ್ಮಪುರ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ. ವಾಮಾಚಾರ ಅಭ್ಯಾಸ ಮಾಡುತ್ತಿರುವುದರಿಂದಲೇ ಗ್ರಾಮದಲ್ಲಿ ಸಾವುಗಳು ಸಂಭವಿಸುತ್ತಿವೆ ಎಂದು ಅನುಮಾನಿಸಿದ ಗ್ರಾಮದ ಗುಂಪೊಂದು ಆರು ಮಂದಿಯನ್ನು ಮನೆಯಿಂದ ಹೊರಗೆ ಎಳೆದು ತಂದಿದ್ದು, ಬಲವಂತವಾಗಿ ಮನುಷ್ಯನ ಮಲ ಮೂತ್ರವನ್ನು ತಿನ್ನಿಸಿದ್ದಾರೆ. ವಯಸ್ಸನ್ನು ಲೆಕ್ಕಿಸದೆ ಕ್ರೂರವಾಗಿ ಥಳಿಸಿದ್ದು, ಸಾರ್ವಜನಿಕರ ಎದುರಲ್ಲೇ ಅವರ ಹಲ್ಲನ್ನು ಕೀಳಲಾಗಿದೆ.
ಈ ಘಟನೆ ಸಂಬಂಧ ಮೂರು ಪ್ರಕರಣ ದಾಖಲಿಸಲಾಗಿದ್ದು, 29 ಮಂದಿಯನ್ನು ಬಂಧಿಸಲಾಗಿದೆ. ಆರು ಮಂದಿಯ 8 ಹಲ್ಲುಗಳನ್ನು ಮುರಿಯಲಾಗಿದೆ. ಈ ಪ್ರದೇಶದಲ್ಲಿ ಯಾವುದೇ ಅಹಿತರ ಘಟನೆ ನಡೆಯದಂತೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ರಾಯ್ ಹೇಳಿದ್ದಾರೆ.
Advertisement