ನವದೆಹಲಿ: ಪಾಕಿಸ್ತಾನದ ಆಹ್ವಾನವನ್ನು ಒಪ್ಪಿ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಗೆ ತೆರಳುತ್ತಿಲ್ಲ. ಭಕ್ತರಾಗಿ ಗುರುದ್ವಾರಕ್ಕಷ್ಟೇ ಭೇಟಿ ನೀಡಲಿದ್ದಾರೆಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದ ಪಂಜಾಬ್ ಮುಖ್ಯಮಂತ್ರಿಗಳು ಈ ಕುರಿತು ಮಾತುಕತೆ ನಡೆಸಿದ್ದಾರೆ.
ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನವು ಕರ್ತಾರ್ಪುರ ಕಾರಿಡಾರ್ ಉದ್ಘಾಟಿಸಿದ ಬಳಿಕ ನ.9 ರಂದು ಕರ್ತಾರ್ಪುರ ಸಾಹಿಬ್ ಗುರುದ್ವಾರಕ್ಕೆ ತೆರಳಲಿರುವ ಸರ್ವಪಕ್ಷ ಜಾಥಾದಲ್ಲಿ ಭಾಗಿಯಾಗಲು ಮನಮೋಹನ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆಂದು ಹೇಳಿದ್ದಾರೆ.
ಗುರುದ್ವಾರಕ್ಕೆ ಭೇಟಿ ನೀಡಲಿರುವ ನಿಯೋಗದಲ್ಲಿ ಭಾಗಿಯಾಗಲು ನೀಡಿದ ಆಹ್ವಾನವನ್ನು ಸಿಂಗ್ ಅವರು ಒಪ್ಪಿದ್ದಾರೆ. ಆದರೆ, ಪಾಕಿಸ್ತಾನದ ಆಹ್ವಾನವನ್ನು ಒಪ್ಪಿ ಕರ್ತಾರ್ಪುರಕ್ಕೆ ಹೋಗುತ್ತಿಲ್ಲ ಎಂದು ತಿಳಿಸಿದ್ದಾರೆ.
Advertisement