ಬಣ ರಾಜಕೀಯಕ್ಕೆ ನಲುಗಿ ಹೋಗಿರುವ ಕರ್ನಾಟಕ, ದೆಹಲಿ, ಮ.ಪ್ರ. ಕಾಂಗ್ರೆಸ್: ಇಂದು ನಾಯಕರ ಬದಲಾವಣೆ?

ಹಲವು ಸಮಯಗಳ ವಿಳಂಬದ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೊನೆಗೂ ದೆಹಲಿ, ಮಧ್ಯ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಕಾಂಗ್ರೆಸ್ ನಾಯಕರ ಆಯ್ಕೆ ಮಾಡುವ ತೀರ್ಮಾನಕ್ಕೆ ಬರುವಂತಿದೆ. ಇಲ್ಲಿ ಬಣ ರಾಜಕೀಯದಿಂದಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗಳಿಗೆ ಕಿತ್ತಾಟಗಳು ನಡೆಯುತ್ತಿವೆ.
ರಾಹುಲ್ ಗಾಂಧಿ-ಸೋನಿಯಾ ಗಾಂಧಿ
ರಾಹುಲ್ ಗಾಂಧಿ-ಸೋನಿಯಾ ಗಾಂಧಿ

ನವದೆಹಲಿ: ಹಲವು ಸಮಯಗಳ ವಿಳಂಬದ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೊನೆಗೂ ದೆಹಲಿ, ಮಧ್ಯ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ಕಾಂಗ್ರೆಸ್ ನಾಯಕರ ಆಯ್ಕೆ ಮಾಡುವ ತೀರ್ಮಾನಕ್ಕೆ ಬರುವಂತಿದೆ. ಇಲ್ಲಿ ಬಣ ರಾಜಕೀಯದಿಂದಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗಳಿಗೆ ಕಿತ್ತಾಟಗಳು ನಡೆಯುತ್ತಿವೆ.


ಹೊಸ ರಾಜ್ಯಾಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳ ನೇಮಕ ಮಾಡುವ ಮೂಲಕ ಉತ್ತರ ಪ್ರದೇಶ ಕಾಂಗ್ರೆಸ್ ಗೆ ಸಂಪೂರ್ಣವಾಗಿ ಬದಲಾವಣೆ ಮಾಡಿ ಸೋನಿಯಾ ಗಾಂಧಿ ಕಳೆದ ಸೋಮವಾರ ಆದೇಶ ಹೊರಡಿಸಿದ್ದಾರೆ.


ದೆಹಲಿ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ವಾರ ರಾಜ್ಯಾಧ್ಯಕ್ಷರ ನೇಮಕ ಮಾಡುವ ಸಾಧ್ಯತೆಯಿದ್ದು ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಇಂದೇ ನಡೆಯಬೇಕಿದೆ, ಏಕೆಂದರೆ ನಾಳೆಯಿಂದ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಕಳೆದ ಜುಲೈಯಲ್ಲಿ ಶೀಲಾ ದೀಕ್ಷಿತ್ ಅವರ ನಿಧನ ನಂತರ ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಹುದ್ದೆ ಖಾಲಿ ಉಳಿದಿದೆ. ಇಲ್ಲಿ ಡಿಸೆಂಬರ್ ಅಂತ್ಯಕ್ಕೆ ಚುನಾವಣೆ ನಡೆಯಲಿದೆ.


ಈ ಬಾರಿಯ ಚುನಾವಣೆಯಲ್ಲಿ ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಪ್ ಜೊತೆಗೆ ಕಾಂಗ್ರೆಸ್ ಕೈಜೋಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಹುದ್ದೆಗೆ ರಾಜೇಶ್ ಲಿಲೊತಿಯಾ, ಸಂದೀಪ್ ದೀಕ್ಷಿತ್ ಮತ್ತು ನವಜೋತ್ ಸಿಂಗ್ ಸಿಧು ಅವರ ಹೆಸರು ಕೇಳಿಬರುತ್ತಿದೆ. 


ಇನ್ನು ಕಾಂಗ್ರೆಸ್ ಅಧಿಕಾರವಿರುವ ಮಧ್ಯ ಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಪಕ್ಷದ ನಾಯಕರೊಳಗೆ ಗುದ್ದಾಟಗಳು ನಡೆಯುತ್ತಿವೆ. ಮಧ್ಯ ಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧ್ಯಾ ಮತ್ತು ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ನಡುವಿನ ಜಗಳವನ್ನು ಸೋನಿಯಾ ಮೊದಲು ಶಮನಗೊಳಿಸಬೇಕಿದೆ. ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಸಹಮತವಿರುವ ಮತ್ತೊಬ್ಬ ನಾಯಕನನ್ನು ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸಬೇಕಿದೆ. ರಾಜಸ್ತಾನದಲ್ಲಿ ಹೊಸ ನಾಯಕರ ನೇಮಕವನ್ನು ಸೋನಿಯಾ ಗಾಂಧಿ ಈಗ ತಕ್ಷಣ ಮಾಡುವ ಸಾಧ್ಯತೆಯಿಲ್ಲ, ಬದಲಾಗಿ ಮಧ್ಯ ಪ್ರದೇಶದ ನೂತನ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುತ್ತಾರೆ ಎನ್ನುತ್ತಾರೆ ಪಕ್ಷದ ಹಿರಿಯ ನಾಯಕರೊಬ್ಬರು.


ರಾಜಸ್ತಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿರುತ್ತದೆ. ಪೈಲಟ್, ರಾಜಸ್ತಾನದ ಕಾಂಗ್ರೆಸ್ ಅಧ್ಯಕ್ಷರಾಗಿ ಕಳೆದ 6 ವರ್ಷಗಳಿಂದ ಇದ್ದಾರೆ.


ಕಳೆದ ವಾರ ಕರ್ನಾಟಕದಲ್ಲಿ ಎಐಸಿಸಿ ಪ್ರದಾನ ಕಾರ್ಯದರ್ಶಿ ಮಧುಸೂಧನ್ ಮಿಸ್ತ್ರಿ ಹಲವು ಸುತ್ತಿನ ಮಾತುಕತೆಗಳನ್ನು ರಾಜ್ಯ ನಾಯಕರೊಂದಿಗೆ ನಡೆಸಿದ್ದಾರೆ. ಇಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಹೆಚ್ ಕೆ ಪಾಟೀಲ್ ನಡುವೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ತೀವ್ರ ಪೈಪೋಟಿಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com