ಕೊಚ್ಚಿ: ಪ್ರೀತಿಯ ಹೆಸರಲ್ಲಿ ಕೇರಳದಲ್ಲಿ ಮತ್ತೊಂದು ಮರ್ಡರ್ ನಡೆದಿದೆ. ಪ್ರೀತಿ ನಿರಾಕಸಿದ್ದಕ್ಕೆ ದ್ವೀತಿಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಯುವತಿಗೆ ಯುವಕನೊಬ್ಬ ಬೆಂಕಿ ಹಚ್ಚಿ ಕೊಂದಿದ್ದಾನೆ. ನಂತರ ಉರಿಯುತ್ತಿರುವ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿ ತಾನೂ ಸತ್ತಿರುವ ಘಟನೆ ಕಳೆದ ರಾತ್ರಿ ಕೊಚ್ಚಿಯಲ್ಲಿ ನಡೆದಿದೆ.
ಎರ್ನಾಕುಲಂ ಜಿಲ್ಲೆಯ ಉತ್ತರ ಪರಾವೂರು ಗ್ರಾಮದ ನಿವಾಸಿ ಸಾ ಮಿಧುನ್ ಮಧ್ಯರಾತ್ರಿ 12-15ರ ಸುಮಾರಿನಲ್ಲಿ ಯುವತಿ ದೇವಿಕಾ ಅಕಾ ಪರುವಿನ ಗ್ರಾಮವಾದ ಕಾಕ್ಕನಾಡ ಬಳಿಯ ಅಥಣಿಗೆ ತೆರಳಿದ್ದಾನೆ. ಯುವತಿ ತಂದೆ ಶಾಲಾನ್ ಮನೆಯ ಬಾಗಿಲು ತೆರೆದಿದ್ದು, ಪರುವನ್ನು ನೋಡಬೇಕೆಂದು ಯುವಕ ಒತ್ತಾಯಿಸಿದ್ದಾನೆ. ಪರು ಅರ್ಧ ನಿದ್ರೆ ಮಾಡಿ ಮನೆಯಿಂದ ಹೊರಗೆ ಬಂದಾಗ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ಉರಿಯುತ್ತಿರುವ ಬೆಂಕಿಗೆ ತಾನೂ ಕೂಡಾ ಬಿದಿದ್ದಾನೆ.
ಈ ಭಯಾನಕ ಘಟನೆ ನೋಡಿದ ಸ್ಥಳೀಯರು ಪೊಲೀಸರಿಗೆ ಸುದ್ದಿಮುಟ್ಟಿಸಿದ್ದು, ಆಸ್ಪತ್ರೆಗೆ ಇಬ್ಬರನ್ನು ರವಾನಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿಯೇ ದೇವಿಕಾ ಹಾಗೂ ಮಿಧುನ್ ಇಬ್ಬರು ಮೃತಪಟ್ಟಿದ್ದಾರೆ. ತನ್ನ ಪುತ್ರಿಯನ್ನು ಕಾಪಾಡಲು ಯತ್ನಿಸಿದ ತಂದೆ ಕೂಡಾ ಸುಟ್ಟು ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮಿಧುನ್ ಈ ರೀತಿಯ ಕೃತ್ಯವೆಸಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೇರಳದಲ್ಲಿ ಪ್ರೀತಿಯ ಹೆಸರಲ್ಲಿ ನಡೆದ ಆರನೇ ಹತ್ಯೆ ಇದಾಗಿದೆ. ಇನ್ನಿತರ 10 ಪ್ರಕರಣಗಳಲ್ಲಿ ಪ್ರೀತಿ ನಿರಾಕರಿಸಿದ ಯುವತಿಯರ ಮೇಲೆ ಹಲ್ಲೆ ನಡೆಸಲಾಗಿದೆ.
Advertisement