ನವದೆಹಲಿ: ಅಯೋಧ್ಯ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಲು ಮುಸ್ಲಿಂ ಸಮುದಾಯದ ಬೌದ್ಧಿಕ ಗುಂಪೊಂದು ಒಲವು ತೋರಿಸಿದ್ದು, ಮುಸ್ಲಿಂರು ವಿವಾದಿತ ಜಾಗವನ್ನು ಸ್ನೇಹಪೂರ್ವಕವಾಗಿ ಕೇಂದ್ರ ಸರ್ಕಾರಕ್ಕೆ ನೀಡಿದರೆ ದೇಶದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದೆ.
ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಭೂ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವ ಸಂಬಂಧ ನಿನ್ನೆ ನಿರ್ಣಯವೊಂದನ್ನು ಕೈಗೊಳ್ಳಲಾಗಿದೆ ಎಂದು ನೂತನ ಸ್ಥಾಪಿತ ಶಾಂತಿಗಾಗಿ ಭಾರತೀಯರು ಮುಸ್ಲಿಂರು ವೇದಿಕೆ ಸಂಚಾಲಕ ಕಲಾಂ ಖಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದ ಹೊರಗಡೆ ವಿವಾದವನ್ನು ಬಗೆಹರಿಸಿಕೊಳ್ಳುವುದರಿಂದ ಹಿಂದೂ- ಮುಸ್ಲಿಂರು ಸಂತೋಷದಿಂದ ಇರಬಹುದು, ಯಾವುದೇ ಸಮುದಾಯವು ಆಕ್ರಮಣಕಾರಿ ಭಾವನೆ ತಾಳಬಾರದು ಎಂದರು.
ಹಿಂದೂ- ಮುಸ್ಲಿಂ ನಡುವಿನ ಸಂಬಂಧಕ್ಕೆ ಶತಮಾನದ ಇತಿಹಾಸವಿದೆ. ಜಾತ್ಯತೀತ ಹಾಗೂ ಪ್ರಜಾಸತಾತ್ಮಕ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ವಿವಾದಿತ ಜಾಗವನ್ನು ಸೌಹಾರ್ದತೆಯ ಭಾವನೆಯೊಂದಿಗೆ ಸುಪ್ರೀಂಕೋರ್ಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಹಸ್ತಂತರಿಸಬೇಕು ಎಂದು ಅವರು ಮುಸ್ಲಿಂ ಸಮುದಾಯಕ್ಕೆ ಸಲಹೆ ನೀಡಿದರು.
Advertisement