ನವದೆಹಲಿ: ಮುಂಬರುವ ಮಹಾರಾಷ್ಟ್ರ ಚುನಾವಣೆ ಹಿನ್ನೆಲೆ ಬಿಜೆಪಿ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯಲ್ಲಿ ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಭರವಸೆ ಕೊಟ್ಟಿದೆ. ಈ ಪ್ರಸ್ತಾಪವನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್ ಸಾವರ್ಕರ್ ಗೆ ಭಾರತ ರತ್ನ ನೀಡುವ ಬಿಜೆಪಿ ಮುಂದಿನ ದಿನಗಳಲ್ಲಿ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಅವರಿಗೆ ಸಹ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿದರೆ ಆಶ್ಚರ್ಯವಿಲ್ಲ ಎಂದಿದೆ.
ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಮಾತನಾಡಿ "ಬಿಜೆಪಿಯವರು ಭಾರತ ರತ್ನ ನೀಡಲಿರುವವರಲ್ಲಿ ನಾಥುರಾಮ್ ಗೋಡ್ಸೆ ಹೆಸರು ಮುಂದಿನ ಸಾಲಿನಲ್ಲಿರಬಹುದು" ಎಂದಿದ್ದಾರೆ.
"ಸಾವರ್ಕರ್ ಅವರ ಇತಿಹಾಸ ಎಲ್ಲರಿಗೂ ತಿಳಿದಿದೆ. ಸಾವರ್ಕರ್ ಗಾಂಧಿಯನ್ನು ಕೊಲೆ ಮಾಡಿದ ಆರೋಪ ಹೊಂದಿದ್ದರು. ಸಾಕ್ಷ್ಯಾಧಾರದ ಕೊರತೆಯಿಂದ ಅವರನ್ನು ಬಿಡುಗಡೆ ಮಾಡಲಾಯಿತು. ಇಂದು, ಈ ಸರ್ಕಾರವು ಅವರು ಭಾರತ ರತ್ನ ವನ್ನು ಸಾವರ್ಕರ್ ಅವರಿಗೆ ನೀಡುವುದಾಗಿ ಹೇಳುತ್ತಿದ್ದಾರೆ, ಭವಿಷ್ಯದಲ್ಲಿ ಗೋಡ್ಸೆಗೆ ಸಹ ಬಿಜೆಪಿಗರು ಈ ಪ್ರಶಸ್ತಿ ನೀಡಬಹುದಾಗಿದೆ"
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿನ ಬಿಜೆಪಿ ಪ್ರಣಾಳಿಕೆಯನ್ನು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಂಗಳವಾರ ಬಿಡುಗಡೆ ಮಾಡಿದ್ದಾರೆ.ಪ್ರಣಾಳಿಕೆಯಲ್ಲಿ ಇರುವ ಇತರೆ ಭರವಸೆಗಳೊಡನೆ ಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿ ನೀಡುವ ಪ್ರಸ್ತಾಪ ಮಾಡಲಾಗಿದೆ. ಅದೇ ವೇಳೆ ಸಾವರ್ಕರ್ ಮಾತ್ರವಲ್ಲದೆ ಮಹಾತ್ಮ ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ ಅವರುಗಳಿಗೆ ಸಹ ಭಾರತ ರತ್ನ ನೀಡುವುದಾಗಿ ಹೇಳಿದೆ.
Advertisement