ನವದೆಹಲಿ: ಮಳೆಗಾಲ ಮುಗಿದು ಚಳಿಗಾಲ ಕಾಲಿಡುತ್ತಿದೆ. ವಾತಾವರಣ ಬಿಸಿಯಾಗುತ್ತಿದೆ. ದೇಶಾದ್ಯಂತ ಅಲ್ಲಲ್ಲಿ ನೀರಿನ ಬರ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ ಇ) ನೀರನ್ನು ಸರಿಯಾಗಿ ಬಳಕೆ ಮಾಡುವಂತೆ ತನ್ನ ಅಧೀನದಲ್ಲಿ ಬರುವ ಶಾಲೆಗಳಿಗೆ ಆದೇಶ ಹೊರಡಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ನೀರಿನ ನಿರ್ವಹಣೆ ಮತ್ತು ನಿಗದಿತವಾಗಿ ನೀರಿನ ಲೆಕ್ಕಪರಿಶೋಧನೆ ನಡೆಸುವಂತೆ ಹೇಳಿದೆ.
ನೀತಿ ಆಯೋಗದ ಇತ್ತೀಚಿನ ವರದಿಯಲ್ಲಿ, ಬೆಂಗಳೂರು, ದೆಹಲಿ, ಚೆನ್ನೈ, ಹೈದರಾಬಾದ್ ಸೇರಿದಂತೆ 21 ನಗರಗಳಲ್ಲಿ ಮುಂದಿನ ವರ್ಷದ ಹೊತ್ತಿಗೆ ಅಂತರ್ಜಲ ಕುಸಿಯಲಿದ್ದು, ಇದರಿಂದ ಸುಮಾರು 100 ದಶಲಕ್ಷ ಮಂದಿಗೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದೆ.
ಈ ನಿಟ್ಟಿನಲ್ಲಿ ಸಿಬಿಎಸ್ ಇ ನೀರಿನ ಸಂರಕ್ಷಣೆ ಮಾರ್ಗಸೂಚಿ ರಚಿಸಿದ್ದು, ತನ್ನ ಅಧೀನದಲ್ಲಿ ಬರುವ ಶಾಲೆಗಳಲ್ಲಿ ನೀರಿನ ಸಂರಕ್ಷಣೆಗೆ ಅತ್ಯಾಧುನಿಕ ಸುರಕ್ಷಿತ ಸಾಧನಗಳನ್ನು ಅಳವಡಿಸಿಕೊಳ್ಳಬೇಕು. ಸೆನ್ಸಾರ್ ಗಳನ್ನು ಹೊಂದಿರುವ ಸ್ವಯಂಚಾಲಿತ ಟ್ಯಾಪ್ ಗಳು, ಆದ್ಯತೆ ಮೇರೆಗೆ ಡಬಲ್ ಫ್ಲಶ್ ಟ್ಯಾಂಕುಗಳು, ನೀರಿನ ಸೋರಿಕೆಯಾಗುತ್ತಿದೆಯೇ ಎಂದು ನಿಗದಿತವಾಗಿ ತಪಾಸಣೆ ಮಾಡುವುದು ಇತ್ಯಾದಿಗಳನ್ನು ಮುಂದಿನ ಮೂರು ವರ್ಷದೊಳಗೆ ಅಳವಡಿಸುವಂತೆ ಸೂಚಿಸಿದೆ.
Advertisement