ಜೈಪುರ: ನಗರ ಸ್ಥಳೀಯ ಸಂಸ್ಥೆ ಮುಖ್ಯಸ್ಥರ ಚುನಾವಣೆಗೆ ಸಂಬಂಧಿಸಿದಂತೆ ತಮ್ಮದೇ ಸರ್ಕಾರದ ನಿರ್ಧಾರವನ್ನು ರಾಜಸ್ತಾನ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಪ್ರಶ್ನಿಸಿದ್ದಾರೆ. ತಮ್ಮೊಂದಿಗೆ ಸಮಾಲೋಚಿಸದೆ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸದವರನ್ನು ಮೇಯರ್ ನಂತಹ ಉನ್ನತ ಹುದ್ದೆ ನೀಡಲು ಮುಂದಾಗಿರುವ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಆಡಳಿತದ ರಾಜಸ್ತಾನ ಸರ್ಕಾರದ ಇತರ ಇಬ್ಬರು ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದು ಸರಿಯಾದ ನಿರ್ಧಾರವಲ್ಲ,ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ನಿರ್ಧಾರ ಪ್ರಾಯೋಗಿಕವಾಗಿಲ್ಲ. ನಿರ್ಧಾರ ಬದಲಾಯಿಸಬೇಕಾದ ಅಗತ್ಯವಿದೆ ಎಂದು ಸುದ್ದಿಗಾರರಿಗೆ ಸಚಿನ್ ಪೈಲಟ್ ಪ್ರತಿಕ್ರಿಯಿಸಿದ್ದಾರೆ.
ಮೇಯರ್ ಹಾಗೂ ಮುಖ್ಯಸ್ಥರ ಸ್ಥಾನಕ್ಕೆ ಪರೋಕ್ಷ ಚುನಾವಣೆ ನಡೆಸಲು ನಿರ್ಧರಿಸಿದ್ದೇವೆ. ಇದು ಉತ್ತಮವಾಗಿತ್ತು. ಆದರೆ, ಹಠಾತ್ತನೇ ಹೊಸ ನಿರ್ಧಾರ ಕೈಗೊಂಡಿರುವುದನ್ನು ಪತ್ರಿಕೆಗಳಿಂದ ತಿಳಿದುಕೊಂಡಿದ್ದೇನೆ. ಇದನ್ನು ಸಂಪುಟದಲ್ಲಾಗಲೀ ಅಥವಾ ಶಾಸಕಾಂಗ ಸಭೆಯಲ್ಲಾಗಲೀ ಚರ್ಚಿಸಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಸರ್ಕಾರದ ನಿರ್ಧಾರವನ್ನು ಹೈಬ್ರಿಡ್ ಎಂದು ಕರೆದಿರುವ ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಸಚಿನ್ ಪೈಲಟ್, ಹಿಂಬಾಗಿಲ ಮೂಲಕ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು ನೇಮಕ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಟೀಕಿಸಿದ್ದಾರೆ
Advertisement