ಲಾಹೋರ್: ಭಾರತ ಮತ್ತು ಪಾಕಿಸ್ತಾನದ ಸಿಖ್ ಧರ್ಮೀಯರ ಪವಿತ್ರ ಯಾತ್ರಾ ಕ್ಷೇತ್ರ ಕರ್ತಾರ್ಪುರ್ ಕಾರಿಡಾರ್ ಉದ್ಘಾಟನೆಗೆ ಆಗಮಿಸಲು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿದೆ.
ಗುರುನಾನಕ್ ಅವರ 550 ನೇ ಜಯಂತಿ ಅಂಗವಾಗಿ ಭಾರತ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಕರ್ತಾರ್ಪುರ್ ಗೆ ಭೇಟಿ ನೀಡಲು ಆಹ್ವಾನಿಸಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮೊಹಮ್ಮದ್ ಖುರೇಷಿ ತಿಳಿಸಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ಆಹ್ವಾನ ಒಪ್ಪಿಕೊಂಡಿರುವುದಕ್ಕಾಗಿ ಡಾ. ಮನಮೋಹನ್ ಸಿಂಗ್ ಅವರಿಗೆ ಖುರೇಷಿ ಧನ್ಯವಾದ ಸಲ್ಲಿಸಿದ್ದಾರೆ. 'ಡಾ. ಮನಮೋಹನ್ ಸಿಂಗ್ ಅವರು ಸಹ ಈ ಸಂಬಂಧ ತಮಗೆ ಪತ್ರ ಬರೆದಿದ್ದು, ಪತ್ರದಲ್ಲಿ, ಮುಖ್ಯ ಅತಿಥಿಯಾಗಿ ಅಲ್ಲ, ಸಾಮಾನ್ಯ ವ್ಯಕ್ತಿಯಾಗಿ ಕರ್ತಾರ್ಪುರಕ್ಕೆ ಭೇಟಿ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಅಂತೆಯೇ ಡಾ. ಮನಮೋಹನ್ ಸಿಂಗ್ ಅವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಖುರೇಷಿ ಹೇಳಿದ್ದಾರೆ.
ಈ ಹಿಂದೆ ಕರ್ತಾರ್ಪುರ್ಗೆ ಭೇಟಿ ನೀಡಲು ನಿರಾಕರಿಸಿದ್ದ ಡಾ. ಮನಮೋಹನ್ ಸಿಂಗ್ ನಂತರ ತಮ್ಮ ನಿರ್ಧಾರ ಬದಲಾಯಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
Advertisement