ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮೂರು ಉಗ್ರರ ಕ್ಯಾಂಪ್ ಗಳನ್ನು ನಾಶಗೊಳಿಸಲಾಗಿದೆ ಎಂಬ ಭಾರತೀಯ ಸೇನೆಯ ವಾದವನ್ನು ಪಾಕಿಸ್ತಾನ ಸೇನೆ ತಿರಸ್ಕರಿಸಿದೆ. ಒಂದು ವೇಳೆ ತಮ್ಮ ವಾದ ನಿಜವಾದಲ್ಲಿ ಯಾವುದೇ ವಿದೇಶಿ ರಾಯಭಾರಿ ಅಥವಾ ಮಾಧ್ಯಮಗಳಿಂದ ಆ ಪ್ರದೇಶದಲ್ಲಿ ಪುರಾವೆಗಳನ್ನು ಒದಗಿಸುವಂತೆ ಭಾರತವನ್ನು ಆಹ್ವಾನಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ತಂಗ್ಧರ್ ಮತ್ತು ಕೇರಾನ್ ಸೆಕ್ಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂರು ಉಗ್ರರ ಕ್ಯಾಂಪ್ ಗಳನ್ನು ಭಾರತೀಯ ಸೇನೆಯಿಂದ ಧ್ವಂಸಗೊಳಿಸಲಾಗಿದೆ. ಆರರಿಂದ 10 ಪಾಕಿಸ್ತಾನದ ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭಾನುವಾರ ಹೇಳಿಕೆ ನೀಡಿದ್ದರು.
ರಾವತ್ ಹೇಳಿಕೆಗೆ ತಡರಾತ್ರಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಸೇನೆ ವಕ್ತಾರ ಮೇಜರ್ ಜನರಲ್ ಅಸಿಫ್ ಘಫೂರ್, 3 ಉಗ್ರರ ಶಿಬಿರಗಳನ್ನು ನಾಶಪಡಿಸಿರುವುದಾಗಿ ಭಾರತೀಯ ಸೇನಾ ಮುಖ್ಯಸ್ಥರ ಹೇಳಿಕೆಯು ಹತಾಶೆಯಿಂದ ಕೂಡಿದೆ. ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದಿದ್ದಾರೆ.
ಪುಲ್ವಾಮಾ ದಾಳಿಯಾದಾಗಿನಿಂದಲೂ ಈ ಪ್ರದೇಶದಲ್ಲಿ ಶಾಂತಿಗೆ ಭಂಗವಾಗಿದ್ದು, ಉದ್ದೇಶಪೂರ್ವಕವಾಗಿ ಭಾರತೀಯ ಸೇನಾ ಮುಖ್ಯಸ್ಥರು ಸುಳ್ಳಿನ ಹೇಳಿಕೆ ನೀಡುತ್ತಿದ್ದಾರೆ. ಒಂದು ವೇಳೆ ತಮ್ಮ ವಾದ ಸತ್ಯವಾಗಿದ್ದಲ್ಲಿ ವಿದೇಶಿ ರಾಯಭಾರಿ ಅಥವಾ ಮಾಧ್ಯಮಗಳನ್ನು ಉಗ್ರರ ಕ್ಯಾಂಪ್ ನಾಶಪಡಿಸಿರುವ ಸ್ಥಳಕ್ಕೆ ಕರೆತಂದು ಸಾಕ್ಷ್ಯವನ್ನು ಒದಗಿಸಲಿ ಎಂದು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಬಾರಿಗಳಿಗೆ ತಿಳಿಸಿದ್ದಾರೆ.
ಇಂತಹ ಸುಳ್ಳಿನ ಹೇಳಿಕೆಗಳು ಸೇನಾ ವೃತ್ತಿಗೆ ವಿರುದ್ದವಾಗಿವೆ ಎಂದು ಅಸಿಫ್ ಘಫೂರ್ ಟೀಸಿದ್ದಾರೆ.
Advertisement