ರಾಂಚಿ: ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆಗೆ ದಿನಗಣನೇ ಆರಂಭವಾಗಿರುವ ಬೆನ್ನಲ್ಲೇ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದ್ದು, ನಾಲ್ವರು ಕಾಂಗ್ರೆಸ್ ಹಾಗೂ ಜೆಎಂಎಂ ಶಾಸಕರು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ.
ಬಿಜೆಪಿ ಈಗಾಗಲೇ ವಿಧಾನಸಭೆ ಚುನಾವಣೆ ಪ್ರಚಾರ ಆರಂಭಿಸಿದ್ದು, ಮುಖ್ಯಮಂತ್ರಿ ರಘುಬರ್ ದಾಸ್ ಅವರು ಜನ ಆರ್ಶೀವಾದ ಯಾತ್ರೆ ಕೈಗೊಂಡಿದ್ದಾರೆ.
ಈ ಮಧ್ಯೆ, ಪ್ರತಿಪಕ್ಷಗಳ ಶಾಸಕರನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದ್ದು, ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಶಾಸಕ ಸುಖದೇವ್ ಭಗತ್ ಮತ್ತು ಕಾಂಗ್ರೆಸ್ ಶಾಸಕ ಮನೋಜ್ ಯಾದವ್ ಅವರ ಸಂಪರ್ಕದಲ್ಲಿದೆ. ಅಲ್ಲದೆ ಕುನಲ್ ಸಾರಂಗಿ ಮತ್ತು ದೀಪಕ್ ಬಿರುವ ಸೇರಿದಂತೆ ಜೆಎಂಎಂನ ಮೂರು-ನಾಲ್ಕು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದು, ಕೇಸರಿ ಪಕ್ಷ ಸೇರಲು ಸಿದ್ಧತೆ ನಡೆಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದ್ದ ಜೆಎಂಎಂ ಉಚ್ಛಾಟಿತ ಶಾಸಕ ಜೆಪಿ ಪಟೇಲ್ ಅವರು ಸಹ ಬಿಜೆಪಿ ಸೇರುವ ಸಾಧ್ಯತೆ ಇದೆ.
ಬಿಜೆಪಿ ಮೂಲಗಳ ಪ್ರಕಾರ, ಪ್ರತಿಪಕ್ಷಗಳ ಕೆಲವು ನಾಯಕರು ಅಕ್ಟೋಬರ್ 23ರಂದು ಅಧಿಕೃತವಾಗಿ ಕೇಸರಿ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ.
Advertisement