ಅಮರಾವತಿ: ಕೆಲಸವಿಲ್ಲ, ಜೀವನ ಸಾಗಿಸಲು ಕಷ್ಟವಾಗುತ್ತಿದೆ ಎಂದು ಬೇಸತ್ತು ಮೂವರು ಕಟ್ಟಡ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡರುವ ಹೃದಯವಿದ್ರಾವಕ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಆಂಧ್ರ ಪ್ರದೇಶದ ತೆನಾಲಿ, ಗುಂಟೂರು ಹಾಗೂ ಮಂಗಳಗಿರಿ ಪ್ರಾಂತ್ಯಗಳಲ್ಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರಲ್ಲಿ ಒಬ್ಬರಾದ ಗುಂಟೂರಿನ ವೆಂಕಟೇಶ್ ಆತ್ಮಹತ್ಯೆಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿದ್ದುಈ ವಿಡಿಯೋ ಇದೀಗ ವೈರಲ್ ಆಗಿದೆ. ತಾನು ನಿರುದ್ಯೋಗಿಯಾಗಿರುವುದು ಹಾಗೂ ಜೀವನೋಪಾಯಕ್ಕೆ ಬೇರೆ ದಾರಿಯಿಲ್ಲದೇ ಇರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ನಿರ್ಮಾಣ ಕ್ಷೇತ್ರದಲ್ಲಿನ ನಿಧಾನಗತಿ, ಅಭಿವೃದ್ಧಿ ಕುಂಠಿತ, ರಾಜ್ಯದ ಮರಳು ನೀತಿಯಿಂದಾಗಿ ಸಾಕಷ್ಟು ಕೆಲಸ ದೊರಕುತ್ತಿಲ್ಲ. ಜೀವನ ಸಾಗಿಸಲು ಕಷ್ಟವಾಗುತ್ತಿದೆ ಎಂದು ಕಾರ್ಮಿಕ ವೆಂಕಟೇಶ್ ತಮ್ಮ ವಿಡಿಯೋದಲ್ಲಿ ನೋವು ತೋಡಿಕೊಂಡಿದ್ದಾರೆ.
ವೆಂಕಟೇಶ್ ಕಳೆದ ನಾಲ್ಕು ತಿಂಗಳುಗಳಿಂದ ನಿರುದ್ಯೋಗಿಯಾಗಿದ್ದರು ಎಂದು ಪತ್ನಿ ರಾಶಿ ಹೇಳುತ್ತಾರೆ. ಉಳಿದಂತೆ ತೆನಾಲಿಯ ನಾಗ ಬ್ರಹ್ಮಾಜಿ ಹಾಗೂ ಮಂಗಳಗಿರಿಯ ಇನ್ನೊಬ್ಬ ಕಾರ್ಮಿಕ ಕೂಡ ನಿರುದ್ಯೋಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
Advertisement