ನಗರದಾದ್ಯಂತ 5 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಅಳವಡಿಕೆ, ಸೂಕ್ಷ್ಮ ಪ್ರದೇಶಗಳಲ್ಲಿ ತುರ್ತು ಪ್ರಹಾರ ದಳ ನಿಯೋಜನೆ
ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈ ನಲ್ಲಿ ಗಣೇಶೋತ್ಸವ ರಂಗೇರಿದ್ದು, ಮುಂಜಾಗ್ರತಾ ಕ್ರಮವಾಗಿ ಮಹಾನಗರಿಯಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಕಾಶ್ಮೀರದ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ದೇಶದ ಹಲವೆಡೆ ಉಗ್ರರು ದಾಳಿ ಮಾಡುವ ಸಾಧ್ಯತೆ ಕುರಿತು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದು, ಇದೇ ಕಾರಣಕ್ಕೆ ದೇಶಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ವಾಣಿಜ್ಯ ರಾಜಧಾನಿ ಮುಂಬೈ ಕೂಡ ಉಗ್ರರ ಸಾಫ್ಟ್ ಲಿಸ್ಟ್ ನಲ್ಲಿದ್ದು, ಇದೇ ಕಾರಣಕ್ಕೆ ಹಾಲಿ ವರ್ಷದ ಗಣೇಶೋತ್ಸವದ ಮೇಲೂ ಉಗ್ರರು ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ವಾಣಿಜ್ಯ ನಗರಿಯಾದ್ಯತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಇನ್ನು ಮುಂಬೈ ಗಣೇಶೋತ್ಸವ ವಿಶ್ವ ವಿಖ್ಯಾತಿ ಪಡೆದಿದ್ದು,. ಲಕ್ಷಾಂತರ ಜನರು ಗಣೇಶೋತ್ಸವ ಮೆರೆವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದೇ ಕಾರಣಕ್ಕೆ ಮುಂಬೈನಾದ್ಯಂತ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿಯೇ ಮುಂಬೈನಾದ್ಯಂತ ಬರೊಬ್ಬರಿ 40 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಐದು ಸಾವಿರಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆ, ಗಲಭೆ ನಿಯಂತ್ರಣ ಪೊಲೀಸ್, ತ್ವರಿತ ಪ್ರತಿಕ್ರಿಯೆ ತಂಡಗಳು, ಬಿಡಿಡಿಎಸ್ ತಂಡ, ಸಂಚಾರ ಪೊಲೀಸ್, ಗೃಹ ರಕ್ಷಕರು, ನಾಗರಿಕ ರಕ್ಷಣಾ ಸೇವೆ ಮತ್ತು ವಿವಿಧ ಗಣೇಶ ಸಂಘಟನೆಗಳ ಸ್ವಯಂ ಸೇವಾ ಕಾರ್ಯಕರ್ತರನ್ನು ಭದ್ರತೆಗೆ ನಿಯೋಜನೆಗೊಳಿಸಲಾಗಿದೆ.
ಇನ್ನು ಮುಂಬೈನಾದ್ಯಂತ ಸುಮಾರು 7,703 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಮತ್ತು 1.63 ಲಕ್ಷ ಗೃಹ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಗಣೇಶ ವಿಸರ್ಜನೆಗೆ ಮಹನಾಗರಿಯಾದ್ಯಂತ ಗಿರ್ಗಾಮ್, ಜುಹು ಸೇರಿದಂತೆ ಒಟ್ಟು 129 ಪ್ರದೇಶಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
Advertisement