ಬೆಂಗಳೂರು: ಕಳೆದ ವಾರ ಬಿಡುಗಡೆಯಾದ ಜೆಡಿಪಿ ದತ್ತಾಂಶವು ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿರುವುದನ್ನು ದೃಢಪಡಿಸಿತ್ತು. ಇದೀಗ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ- ಭಾರತೀಯ ಆರ್ಥಿಕ ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿಂತೆ ಆಗಸ್ಟ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ . 8 ಕ್ಕೆ ಏರಿಕೆ ಆಗಿದೆ.
ಈ ರೀತಿಯ ಗರಿಷ್ಠ ನಿರುದ್ಯೋಗ ಪ್ರಮಾಣ ಸೆಪ್ಟೆಂಬರ್ 2016ರಲ್ಲಿ ಕಂಡುಬಂದಿತ್ತು. ಪ್ರತಿವರ್ಷ 10 ಮಿಲಿಯನ್ ಉದ್ಯೋಗ ಸೃಷ್ಟಿಸುವುದಾಗಿ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. ಆದರೆ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಕ್ರಮವಾಗಿ ಶೇ. 9. 6 ಮತ್ತು 7.8 ರಷ್ಟು ಹೆಚ್ಚಾಗಿರುವುದು ಅತ್ಯಂತ ಕಳವಳಕಾರಿಯಾಗಿದೆ.
ನಿರುದ್ಯೋಗ ಪ್ರಮಾಣ ಸಂಕೀರ್ಣವಾದ ವಿಚಾರ ಆಗಿರುವುದರಿಂದ 2019ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗ ಪ್ರಮಾಣ ಹಾಗೂ ನಗರ ಪ್ರದೇಶದಲ್ಲಿನ ಕಾರ್ಮಿಕ ಪಡೆ ಸಮೀಕ್ಷೆಯನ್ನು ಬಿಡುಗಡೆಗೊಳಿಸುವಲ್ಲಿ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ.
ದೇಶದಲ್ಲಿ ಹೆಚ್ಚುತ್ತಿರುವ ಬಳಕೆಯ ಬೇಡಿಕೆ ಹಾಗೂ ಖಾಸಗಿ ಹೂಡಿಕೆಯಿಂದಾಗಿ ಆರ್ಥಿಕತೆ ಕುಂಠಿತವಾಗಿದೆ ಎಂದು ಕೆಲ ಆರ್ಥಿಕ ತಜ್ಞರು ವಾದಿಸಿದರೆ ಮತ್ತೆ ಕೆಲವರು ಬೇರೊಂದು ವಾದ ಮಂಡಿಸುತ್ತಾರೆ. 2017-18ನೇ ಸಾಲಿನಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಶೇ, 6.1 ರಷ್ಟು ಏರಿಕೆ ಆಗಿತ್ತು. ಇದು ಎಲ್ಲಾ ರಾಷ್ಟ್ರಗಳಲ್ಲಿಯೂ ಇದದ್ದೇ ಇಂತಹ ನಿರುದ್ಯೋಗ ಪ್ರಮಾಣದ ಏರಿಕೆ ಸಾಮಾನ್ಯವಾದದ್ದು ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನ್ನಾಗರಿಯಾ ಹೇಳುತ್ತಾರೆ.
ಕಡಿಮೆ ಉತ್ಪಾದಕತೆ, ಕಡಿಮೆ ವೇತನ ನಿರುದ್ಯೋಗ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಕೆಲ ವರ್ಷಗಳಲ್ಲಿ ಪರಿಸ್ಥಿತಿ ಉತ್ತಮಗೊಳ್ಳಲಿದೆ ಆದರೆ ಸುಧಾರಣೆಗೆ ಸಾಕಷ್ಟು ವೇಗವರ್ಧನೆಯ ಅಗತ್ಯವಿದೆ" ಎಂದು ಅವರು ಪ್ರತಿಪಾದಿಸುತ್ತಾರೆ.
ಆದರೆ, ಅವರ ಅಭಿಪ್ರಾಯವನ್ನು ಎಲ್ಲರೂ ಒಪ್ಪಿಕೊಳ್ಳುವುದಿಲ್ಲ, ಬೇಡಿಕೆ ಮತ್ತು ಹೂಡಿಕೆ ಕುಂಠಿತದ ಜೊತೆಗೆ, ಸಿಮೆಂಟ್, ಉಕ್ಕು ಮತ್ತು ಇತರ ನಿರ್ಮಾಣ ಸಾಮಗ್ರಿಗಳ ಮೇಲಿನ ಹೆಚ್ಚಿನ ಜಿಎಸ್ಟಿ ದರಗಳು ಔಪಚಾರಿಕ ಹಾಗೂ ಅನೌಪಚಾರಿಕ ಉದ್ಯೋಗಗಳನ್ನು ಕಿತ್ತುಕೊಂಡಿವೆ ಎಂಬುದು ಕೆಲವರ ವಾದವಾಗಿದೆ.
ಜಿಎಸ್ಟಿ ದರದ ಹೆಚ್ಚುವರಿ ಸೆಸ್ ಮತ್ತು ಸಿಮೆಂಟ್ ಮತ್ತು ಉಕ್ಕಿನ ಮೇಲಿನ ಹೆಚ್ಚಿನ ದರಗಳು ಸಂಘಟಿತ ವಲಯ ಸೇರಿದಂತೆ ಉದ್ಯೋಗದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಮಂಡಳಿಯ ಮಾಜಿ ಸದಸ್ಯ ಎಂ.ಗೋವಿಂದ ರಾವ್ ಹೇಳುತ್ತಾರೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಈ ಪರಿಣಾಮವನ್ನು ಈಗಾಗಲೇ ನೋಡುತ್ತಿದ್ದೇವೆ. ಇದರಿಂದಾಗಿ 2. 15 ಲಕ್ಷ ಕಾರ್ಮಿಕರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ ಎನ್ನುತ್ತಾರೆ.
Advertisement