'ಕಾಶ್ಮೀರಿ ಉಗ್ರರ ಬೆನ್ನಟ್ಟುವುದಿಲ್ಲ, ಬದಲಾಗಲು ಅವಕಾಶ ನೀಡಿದ್ದೇವೆ, ಬದಲಾಗದಿದ್ದರೆ ಬಂದೂಕಿನ ಪಾಠ ಮಾಡುತ್ತೇವೆ'
ನವದೆಹಲಿ: ಕಣಿವೆ ರಾಜ್ಯದಲ್ಲಿ ಹಿಂಸಾಚಾರ ತಪ್ಪಿಸಲು ವಿಧಿ 370ರ ರದ್ಧತಿ ನೆರವಾಗಲಿದ್ದು, ಅಂತೆಯೇ ಭಯೋತ್ಪಾದನೆಗೆ ನೆರವು ನೀಡುತ್ತಿದ್ದ ಪಾಕಿಸ್ತಾನಕ್ಕೆ ಇಟ್ಟ ಚೆಕ್ ಮೇಟ್ ಆಗಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಆಂಗ್ಲ ಪತ್ರಿಕೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಬಿಪಿನ್ ರಾವತ್ ಅವರು, ಪಾಕಿಸ್ತಾನದ ಕುತಂತ್ರದಿಂದಾಗಿ ಈ ವರೆಗೂ ಕಣಿವೆ ರಾಜ್ಯದ ಒಂದಿಡಿ ತಲೆಮಾರು ಶಾಂತಿ ಅನುಭವಿಸಿಲ್ಲ. ಇನ್ನಾದರೂ ಮನಸ್ಸು ಬದಲಿಸಿ. ಬಂದೂಕು ಕೆಳಗಿಡಿ, ಶಾಂತಿಯನ್ನು ಅಪ್ಪಿಕೊಳ್ಳಿ. ಕಳೆದ 30 ವರ್ಷ ರಕ್ತ ಸುರಿಸಿ ಸಾಧಿಸಿದ್ದಾದರೂ ಏನು? ಇನ್ನಾದರೂ ಶಾಂತಿಯುತ ಬದುಕಿಗೆ ಮರಳಿ ಬನ್ನಿಎಂದು ಕಾಶ್ಮೀರಿ ಜನತೆಗೆ ಮನವಿ ಮಾಡಿದ್ದಾರೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ಪರಿಚ್ಛೇದ ರದ್ದು ಮಾಡಿದ ಕೇಂದ್ರ ಸರ್ಕಾರದ ನಡೆಯನ್ನು ಶ್ಲಾಘಿಸಿರುವ ಬಿಪಿನ್ ರಾವತ್, ಕಣಿವೆ ರಾಜ್ಯದಲ್ಲಿ ಹಿಂಸಾಚಾರ ತಪ್ಪಿಸಲು ವಿಧಿ 370ರ ರದ್ಧತಿ ನೆರವಾಗಲಿದ್ದು, ಅಂತೆಯೇ ಭಯೋತ್ಪಾದನೆಗೆ ನೆರವು ನೀಡುತ್ತಿದ್ದ ಪಾಕಿಸ್ತಾನಕ್ಕೆ ಇಟ್ಟ ಚೆಕ್ ಮೇಟ್ ಆಗಿದೆ. ಅಂತೆಯೇ ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಇನ್ನು 'ಉಗ್ರಗಾಮಿ ಸಂಘಟನೆಗಳಾದ ಜೈಷ್ ಎ ಮೊಹಮದ್ ಮತ್ತು ಲಷ್ಕರ್ ಎ ತಯ್ಯಬಾ ವಿರುದ್ಧ ಕಠಿಣ ಕ್ರಮ ಜರುಗಿಸದ ಪಾಕಿಸ್ತಾನವು ವಿಶ್ವ ಆರ್ಥಿಕ ಕಾರ್ಯಪಡೆಯ ಕೆಂಗಣ್ಣಿಗೆ ಗುರಿಯಾಗಿತ್ತು. 2018ರ ಜೂನ್ ತಿಂಗಳಲ್ಲಿ ಕಾರ್ಯಪಡೆಯು ಪಾಕಿಸ್ತಾನವನ್ನು ಕಂದು ಪಟ್ಟಿಗೆ (ಗ್ರೇ ಲಿಸ್ಟ್) ಸೇರಿಸಿತ್ತು. ಅಕ್ಟೋಬರ್ 2019ರ ಒಳಗೆ ಗಮನಾರ್ಹ ಎನಿಸುವಂಥ ಕ್ರಮಗಳನ್ನು ಜರುಗಿಸದಿದ್ದರೆ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿತ್ತು' ಎಂದು ರಾವತ್ ನೆನಪಿಸಿಕೊಂಡಿದ್ದಾರೆ.
'ಪಾಕಿಸ್ತಾನವನ್ನು ಆರ್ಥಿಕ ಕಾರ್ಯಪಡೆಯು ಕಪ್ಪುಪಟ್ಟಿಗೆ ಸೇರಿಸಿದರೆ, ಆ ದೇಶವು ಒಂದು ರೀತಿಯಲ್ಲಿ ದಿಗ್ಬಂಧನ ಅನುಭವಿಸುವ ಸ್ಥಿತಿ ತಲುಪುತ್ತದೆ. ಈಗ ಪಾಕಿಸ್ತಾನವು ಉಗ್ರಗಾಮಿ ಸಂಘಗಳ ವಿರುದ್ಧ ಏನಾದರೂ ಮಾಡಲೇಬೇಕಾದ ಸ್ಥಿತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಕ್ರಮ ಮಹತ್ವ ಪಡೆದುಕೊಳ್ಳುತ್ತದೆ. ಈ ಬಾರಿ ನಾವು ಉಗ್ರಗಾಮಿಗಳಿಗೂ ಶಾಂತಿಯುತ ಜೀವನಕ್ಕೆ ಮರಳಿಬರಲು ಅವಕಾಶ ಕೊಡುತ್ತಿದ್ದೇವೆ. ಅವರ ಬೆನ್ನಟ್ಟುತ್ತಿಲ್ಲ, ತಪಾಸಣೆ ಮತ್ತು ಗುಂಡಿನ ಚಕಮಕಿಗಳೂ ಕಡಿಮೆಯಾಗಿವೆ. ಯಾರದೋ ಮಾತು ಕೇಳಿ ಬದುಕು ಹಾಳುಮಾಡಿಕೊಳ್ಳಬೇಡಿ. ಸಿಕ್ಕಿರುವ ಅವಕಾಶ ಸದುಪಯೋಗಪಡಿಸಿಕೊಳ್ಳಿ. ಬಂದೂಕು ಕೆಳಗಿಡಿ' ಎಂದು ರಾವತ್ ಕಿವಿಮಾತು ಹೇಳಿದ್ದಾರೆ.
1971ರ ಸೋಲನ್ನೂ ಮರೆತು ಬಿಡಬೇಕು, ಅಂತಹ ಏಟು ನೀಡುತ್ತೇವೆ: ಪಾಕ್ ಗೆ ಭಾರತದ ಎಚ್ಚರಿಕೆ
ಪಾಕ್ ಸೇನೆ, ಸರ್ಕಾರದ ಸಹಾಯದಿಂದ ಕಾಶ್ಮೀರಕ್ಕೆ ಬಂದಿದ್ದೇವೆ: ಬಂಧಿತ ಉಗ್ರರ ತಪ್ಪೊಪ್ಪಿಗೆ
ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ಅಜರ್ ವೈಯಕ್ತಿಕ ನಿಷೇಧಿತ ಉಗ್ರರು; ಕೇಂದ್ರ ಘೋಷಣೆ
ಮೊದಲು ಅಣ್ವಸ್ತ್ರ ಬಳಕೆ ಮಾಡಲ್ಲ ಎಂಬ ನಿಯಮವೇನೂ ಇಲ್ಲ: ಪಾಕ್ ಸೇನೆಯ ಉದ್ಧಟತನ
ಪಾಕ್ ಪ್ರವಾಸದ ಬೆನ್ನಲ್ಲೇ ಚೀನಾ ಸಚಿವರ ದೆಹಲಿ ಭೇಟಿ: 'ಬರಲೇ ಬೇಡಿ' ಎಂದ ಭಾರತ
ಭಾರತದೊಂದಿಗೆ ಎಲ್ಲ ರೀತಿಯ ವ್ಯಾಪಾರ ಕಟ್, ಆದರೆ ದಯಮಾಡಿ ಜೀವ ರಕ್ಷಕ ಔಷಧಿಗಳನ್ನು ನೀಡಿ; ಪಾಕಿಸ್ತಾನದ ಹೊಸ ವರಸೆ!
ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆ ಪರಿಹರಿಸಿಕೊಳ್ಳಲು ಬಯಸಿದ್ದೇವೆ: ಪಾಕ್ ಸಚಿವ ಖುರೇಶಿ
Advertisement