ಎಲ್ಲವೂ ಯೋಜನೆಯ ಪ್ರಕಾರವೇ ನಡೆಯುತ್ತಿದೆ: ವಿಕ್ರಮ್ ಲ್ಯಾಂಡಿಂಗ್ ಕುರಿತು ಇಸ್ರೋ ಮುಖ್ಯಸ್ಥ

ಚಂದ್ರಯಾನ-2 ಬಾಹ್ಯಾಕಾಶ ನೌಕೆ 'ವಿಕ್ರಮ್' ಲ್ಯಾಂಡರ್‌ ಅನ್ನು ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಐತಿಹಾಸಿಕ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು, ನಮ್ಮ ಯೋಜನೆಯ...
'ವಿಕ್ರಮ್' ಲ್ಯಾಂಡರ್‌
'ವಿಕ್ರಮ್' ಲ್ಯಾಂಡರ್‌

ಬೆಂಗಳೂರು: ಚಂದ್ರಯಾನ-2 ಬಾಹ್ಯಾಕಾಶ ನೌಕೆ 'ವಿಕ್ರಮ್' ಲ್ಯಾಂಡರ್‌ ಅನ್ನು ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಐತಿಹಾಸಿಕ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು, ನಮ್ಮ ಯೋಜನೆಯ ಪ್ರಕಾರವೇ ಎಲ್ಲವೂ ನಡೆಯುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಅವರು ಶುಕ್ರವಾರ ಹೇಳಿದ್ದಾರೆ.

'ಆ ಐತಿಹಾಸಿಕ ಕ್ಷಣಕ್ಕಾಗಿ ನಾವು ಅತ್ಯಂತ ಕಾತರದಿಂದ ಕಾಯುತ್ತಿದ್ದೇವೆ. ಎಲ್ಲವೂ ನಮ್ಮ ಯೋಜನೆಯಂತೆ ನಡೆಯುತ್ತಿದೆ' ಎಂದು ಶಿವನ್ ಅವರು ಪಿಟಿಐಗೆ ತಿಳಿಸಿದ್ದಾರೆ.

ವಿಕ್ರಮ್ ಲ್ಯಾಂಡರ್ ಚಂದಿರನ ಮೇಲೆ ಶನಿವಾರ ಬೆಳಗಿನ ಜಾವ 1.30ರಿಂದ 2.30ರ ವೇಳೆಗೆ ಪಾದಾರ್ಪಣೆ ಮಾಡಲಿದೆ. 

ಲ್ಯಾಂಡರ್‌ ಚಂದ್ರನ ಮೇಲೆ ಇಳಿದ ಬಳಿಕ ನಾಳೆ ಬೆಳಗಿನ ಜಾವ 5.30ರಿಂದ 6.30ರ ರೊಳಗೆ ತೆರೆದುಕೊಳ್ಳುತ್ತದೆ. ಒಳಗಿನಿಂದ ‘ಪ್ರಜ್ಞಾನ್‌’ ಹೆಸರಿನ ರೋವರ್‌ ಹೊರಬರುತ್ತದೆ. ಅದು ಒಟ್ಟು 14 ದಿನ 500 ಮೀ. ದೂರವನ್ನು ಕ್ರಮಿಸಿ, ಚಂದ್ರನಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಯನ್ನು ರೋವರ್‌ ಸಂಗ್ರಹಿಸಲಿದೆ.

ಲ್ಯಾಂಡರ್‌ನಿಂದ ಪ್ರತ್ಯೇಕಗೊಂಡಿರುವ ಆರ್ಬಿಟರ್‌ ಇನ್ನೂ ಒಂದು ವರ್ಷ ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಾ ಅಪರೂಪದ ಫೋಟೋಗಳನ್ನು ಭೂಮಿಗೆ ರವಾನಿಸಲಿದೆ.

ಚಂದ್ರನ ಮೇಲೆ ಲ್ಯಾಂಡರ್ ಇಳಿಸಿವ ಇಸ್ರೋ ಸಾಹಸವನ್ನು ನೋಡಲು ಇಡೀ ದೇಶ ಕಾತರದಿಂದ ಕಾಯುತ್ತಿದ್ದ ಘಳಿಗೆ ಇನ್ನೇನು ಹತ್ತಿರವಾಗುತ್ತಿದೆ. ಶುಕ್ರವಾರ ತಡರಾತ್ರಿ ಚಂದ್ರನಲ್ಲಿರುವ ಕಾಣಿಸದ ನೆಲದಲ್ಲಿ ಇಳಿಯುವ ಸಾಹಸವನ್ನು ವಿಕ್ರಮ್ ನಡೆಸಲಿದೆ.

ಈ ಅಪರೂಪದ ಕ್ಷಣಗಳನ್ನು ಇಡೀ ವಿಶ್ವವೇ ಕುತೂಹಲದಿಂದ ಎದುರು ನೋಡುತ್ತಿದೆ. ಈ ವಿಸ್ಮಯ ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರೌಢಶಾಲೆಗಳ 70 ವಿದ್ಯಾರ್ಥಿಗಳ ಜತೆಗೂಡಿ ಬೆಂಗಳೂರಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ಅಪರೂಪದ ಸಾಧನೆಯನ್ನು ವೀಕ್ಷಿಸಲಿದ್ದಾರೆ. ಟೀವಿ ವಾಹಿನಿಗಳಲ್ಲೂ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com