ಚೆನ್ನೈ: ಒಂದು ಕಡೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ವಿಜ್ಞಾನಿಗಳು ಚಂದ್ರಯಾನ -2 ವಿಕ್ರಮ್ ಲ್ಯಾಂಡರ್ ಜೊತೆ ಮರು ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದರೆ ಮತ್ತೊಂದು ಕಡೆ ಕೇಂದ್ರ ಸರ್ಕಾರ ಇಸ್ರೋದ ವಿಜ್ಞಾನಿಗಳು ಹಾಗೂ ಇಂಜಿನಿಯರ್ ಗಳು ಸೇರಿದಂತೆ ಸಾವಿರಾರು ಹಿರಿಯ ಸಿಬ್ಬಂದಿಗಳ ಇನ್ ಕ್ರಿಮೆಂಟ್ ಕಡಿತಗೊಳಿಸಿ ಆಘಾತ ನೀಡಿದೆ.
ಜೂನ್ 12ರಂದು ಬಾಹ್ಯಾಕಾಶ ಇಲಾಖೆಯ ಅಧೀನ ಕಾರ್ಯದರ್ಶಿ ಎಂ ರಾಮದಾಸ್ ಅವರು ಹೊರಡಿಸಿರುವ ಆದೇಶದ ಪ್ರಕಾರ, ಎಸ್ ಡಿ, ಎಸ್ ಇ, ಎಸ್ ಎಫ್ ಮತ್ತು ಎಸ್ ಜಿ ದರ್ಜೆಯ ವಿಜ್ಞಾನಿಗಳು/ಇಂಜಿನಿಯರ್ ಗಳಿಗೆ ನೀಡಲಾಗಿದ್ದ ಎರಡು ಹೆಚ್ಚುವರಿ ಇನ್ ಕ್ರಿಮೆಂಟ್ ಗಳನ್ನು ಜುಲೈ 1, 2019ರಿಂದ ಜಾರಿಗೆ ಬರುವಂತೆ ಕಡಿತಗೊಳಿಸಲಾಗಿದೆ.
"6ನೇ ಕೇಂದ್ರ ವೇತನ ಆಯೋಗದ ಶಿಫಾರಸು ಮತ್ತು ಕಾರ್ಯಕ್ಷಮತೆಗೆ ಸಂಬಂಧಿತ ಪ್ರೋತ್ಸಾಹಕ ಯೋಜನೆ(ಪಿಆರ್ಎಸ್) ಜಾರಿಗೆ ತಂದ ಪರಿಣಾಮವಾಗಿ, ಎಸ್ಡಿ, ಎಸ್ಇ, ಎಸ್ಎಫ್ ಮತ್ತು ಎಸ್ಜಿ ದರ್ಜೆಯ ಸಿಬ್ಬಂದಿಗಳಿಗೆ, ವಿಜ್ಞಾನಿಗಳು / ಎಂಜಿನಿಯರ್ಗಳಿಗೆ ಎರಡು ಹೆಚ್ಚುವರಿ ಇನ್ ಕ್ರಿಮೆಂಟ್ ಗಳನ್ನು ಕಡಿತಗೊಳಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇನ್ನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಬಾಹ್ಯಾಕಾಶ ಇಂಜಿನಿಯರ್ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಸಂತೋಷ್ ಕುಮಾರ್ ಅವರು, ಅದು ನಮ್ಮ ಆಂತರಿಕ ವಿಚಾರ ಎಂದಿದ್ದಾರೆ. ಆದಾಗ್ಯೂ ಈ ಸಂಬಂಧ ಮಧ್ಯ ಪ್ರವೇಶಿಸಿ ಇನ್ ಕ್ರಿಮೆಂಟ್ ಕಡಿತ ಆದೇಶ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಅವರಿಗೆ ಇಂಜಿನಿಯರ್ ಗಳ ಸಂಘ ಮನವಿ ಮಾಡಿದೆ.
Advertisement