ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್, ಸಿಂಧಿಯಾ ದೆಹಲಿಗೆ ಬರುವಂತೆ ಸೋನಿಯಾ ಸಮನ್ಸ್
ನವದೆಹಲಿ:ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥರ ಆಯ್ಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕಮಲ್ ನಾಥ್ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ಬೆಂಬಲಿಗರ ನಡುವಣ ಭಿನ್ನಾಭಿಪ್ರಾಯ ಭುಗಿಲೆದ್ದಿರುವ ಬೆನ್ನಲ್ಲೇ, ಮಂಗಳವಾರ ಹಾಗೂ ಬುಧವಾರ ನಡೆಯಲಿರುವ ಸಭೆಗಾಗಿ ಬರುವಂತೆ ಉಭಯ ನಾಯಕರಿಗೂ ಸೋನಿಯಾ ಗಾಂಧಿ ಸಮನ್ಸ್ ನೀಡಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ನಲ್ಲಿನ ಕೆಟ್ಟ ಹೋರಾಟ ತಡೆಯುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಬರುವಂತೆ ಸೋನಿಯಾ ಗಾಂಧಿ ಇಬ್ಬರು ನಾಯಕರಿಗೂ ಸೂಚಿಸಿದ್ದಾರೆ.ಮಂಗಳವಾರ ಸಿಂಧಿಯಾ, ಬುಧವಾರ ಕಮಲ್ ನಾಥ್ ಬರುವಂತೆ ಹೇಳಿದ್ದಾರೆ. ಸೋನಿಯಾ ಕಮಲ್ ನಾಥ್ ಬೆಂಬಲಿಗರಿಗೆ ಮಣೆ ಹಾಕುವರೇ ಅಥವಾ ಸಿಂಧಿಯಾ ಅವರ ಬೆಂಬಲಿಗರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸುತ್ತಾರೆಯೇ ಎಂಬುದು ನಂತರವಷ್ಟೇ ತಿಳಿಯಲಿದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ಅದು ಕಷ್ಟಕರವೆನಿಸುತ್ತಿದೆ.
ಕೆಲ ದಿನಗಳಿಂದಲೂ ಮಧ್ಯ ಪ್ರದೇಶ ಕಾಂಗ್ರೆಸ್ ನಲ್ಲಿ ಕಚ್ಟಾಟ ನಡೆಯುತಲ್ಲೇ ಇದೆ. ಸಿಂಧಿಯಾ ಪರ ಹೆಚ್ಚಾಗಿದೆ. ಸಿಂಧಿಯಾ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮೊದಲಿಗೆ ದಾಟಿಯಾ ಜಿಲ್ಲಾ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ಡಂಗಿ ಬೆದರಿಕೆ ಹಾಕಿದ್ದರು. ಬಳಿಕ ಮೊರೆನಾ ಜಿಲ್ಲೆಯ ಮುಖ್ಯಸ್ಥ ರಾಕೇಶ್ ಮಾವೈ ಇದೇ ತಂತ್ರ ಅನುಸರಿಸಿದ್ದರು.
ಸಿಂಧಿಯಾ ಜನಪ್ರಿಯತೆಯನ್ನು ಕೆಲ ನಾಯಕರು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರನ್ನು ತುಳಿಯಲು ಸಂಚು ರೂಪಿಸಲಾಗಿದೆ ಎಂದು ಅಶೋಕ್ ಡಂಗಿ ಆರೋಪಿಸಿದ್ದಾರೆ. ಸಿಂಧಿಯಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಆದರೆ, ಎಲ್ಲೂ ಹೇಳಿಕೊಳ್ಳುತ್ತಿಲ್ಲ, ಅವರ ಬೆಂಬಲಿಗರು ಇದೇ ಬೇಡಿಕೆಯೊಡ್ಡಿ ಪೊಸ್ಟರ್ ಗಳನ್ನು ಹಾಕುತ್ತಿದ್ದಾರೆ.
ಮತ್ತೊಂದೆಡೆ ಸಿಂಧಿಯಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಲು ದಿಗ್ವಿಜಯ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ. ಬುಡುಕಟ್ಟು ಸಮುದಾಯದ ಮುಖಂಡರನ್ನು ಮುಖ್ಯಸ್ಥರನ್ನಾಗಿ ಮಾಡುವ ಮೂಲಕ ಸಿಂಧಿಯಾ ಅವರನ್ನು ಹಿಮ್ಮೆಟ್ಟಿಸಲು ಮುಖ್ಯಮಂತ್ರಿ ಕಮಲ್ ನಾಥ್ ಯೋಚಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.