ಶಹಜಾನ್ಪುರ್: ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ಅವರು ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಮಂಗಳವಾರ ಶಹಜಾನ್ಪುರ್ ದ ಮಹಿಳಾ ಹಾಸ್ಟೇಲ್ ನ ಕಾನೂನು ವಿದ್ಯಾರ್ಥಿನಿಯ ರೂಮ್ ಅನ್ನು ಐದು ಗಂಟೆಗಳ ಕಾಲ ತಪಾಸಣೆ ನಡೆಸಿದೆ.
ವಿಧಿ ವಿಜ್ಞಾನ ತಜ್ಞರನ್ನೊಳಗೊಂಡ ಎಸ್ಐಟಿ ತಂಡ ಸುಮಾರು ಐದು ಗಂಟೆಗಳ ಕಾಲ ಹಾಸ್ಟೇಲ್ ನ ಕೊಠಡಿಯಲ್ಲಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಮೂಲಗಳು ತಿಳಿಸಿವೆ.
ಎಸ್ಐಟಿ ತಪಾಸಣೆ ವೇಳೆ ಮಾಜಿ ಕೇಂದ್ರ ಸಚಿವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಕಾನೂನು ಸ್ನಾತಕೋತ್ತರ ವಿದ್ಯಾರ್ಥಿನಿ ಹಾಗೂ ಆಕೆಯ ಕುಟಂಬಸ್ಥರು ಹಾಜರಿದ್ದರು. ಈ ವೇಳೆ ವಿದ್ಯಾರ್ಥಿನಿಯ ವಸ್ತುಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ. ಶೋಧ ಕಾರ್ಯ ಮುಗಿದ ನಂತರ ಆ ರೂಮ್ ಅನ್ನು ಅಧಿಕಾರಿಗಳು ಲಾಕ್ ಮಾಡಿ ಸೀಲ್ ಮಾಡಿದ್ದಾರೆ.
ನಿನ್ನೆಯಷ್ಚೇ ಕಾನೂನು ವಿದ್ಯಾರ್ಥಿನಿ, ಚಿನ್ಮಯಾನಂದ್ ಅವರು ಒಂದು ವರ್ಷಗಳ ಕಾಲ ನನ್ನ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾರೆ ಮತ್ತು ದೈಹಿಕ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಉತ್ತರ ಪ್ರದೇಶದ ಶಹಜಾನ್ಪುರ್ ಚಿನ್ಮಯಾನಂದ್ ಆಶ್ರಮಕ್ಕೆ ಸೇರಿದ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, ಸಂತ ಸಮುದಾಯದ ಹಿರಿಯ ನಾಯಕರೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಳು. ಬಳಿಕ ಆರು ದಿನಗಳ ಕಾಲ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು.
ವಿದ್ಯಾರ್ಥಿನಿ ಚಿನ್ಮಯಾನಂದ್ ಅವರ ಹೆಸರನ್ನು ನೇರವಾಗಿ ಹೇಳಿಲ್ಲ. ಆದರೆ ಮಾಜಿ ಕೇಂದ್ರ ಸಚಿವರು ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ತಂದೆ ಆರೋಪಿಸಿದ್ದರು. ನಿನ್ನೆ ಚಿನ್ಮಯಾನಂದ್ ಅವರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವಿದ್ಯಾರ್ಥಿನಿ ನೇರವಾಗಿ ಆರೋಪಿಸಿದ್ದಾರೆ.
Advertisement